ಬೆಂಗಳೂರು, ಜುಲೈ 11– ರಾಜ್ಯದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಪ್ರವೇಶ ಮತ್ತು ಆಡಳಿತದ ಬಗ್ಗೆ ಸರ್ಕಾರ ಹೊಸ ನಿಯಮಾ ವಳಿಗಳನ್ನು ರೂಪಿಸಿದೆ. ಅದರ ರೀತ್ಯ ಅವುಗಳಲ್ಲಿ ಶೇ 50ರಷ್ಟು ಸೀಟುಗಳು ರಾಜ್ಯದ ವಿದ್ಯಾರ್ಥಿಗಳಿಗೆ, ಹಿಂದುಳಿದ ವರ್ಗಗಳಿಗೆ ಶೇ 25ರಷ್ಟು ಮೀಸಲು.
ಶ್ರೀ ಡಿ.ಬಿ.ಕಲಮನಕರ್ ಅವರ ಗಮನ ಸೆಳೆಯುವ ಸೂಚನೆಗೆ ಹೇಳಿಕೆ ನೀಡಿದ ಆರೋಗ್ಯ ಸಚಿವ ಶ್ರೀ ಎಚ್.ಸಿದ್ಧವೀರಪ್ಪ ಅವರು, ಅವುಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳು ಕಾರ್ಯಗತಗೊಳಿಸಲೆಂದು ಆಶಿಸಿದರು. ಇಲ್ಲದಿದ್ದಲ್ಲಿ ಯಾವ ಕ್ರಮ ತೆಗೆದುಕೊಳ್ಳಬಹುದೆಂದು ಸರ್ಕಾರಕ್ಕೆ ಗೊತ್ತಿದೆಯೆಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಮಣಿಪಾಲ್, ಬೆಳಗಾವಿ, ದಾವಣಗೆರೆ ಮತ್ತು ಗುಲ್ಬರ್ಗಗಳಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ನಡೆಯುತ್ತಿವೆ.
ಗುಲ್ಬರ್ಗದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಪ್ರತೀ ಸೀಟಿಗೆ ಐದು ಸಾವಿರ ರೂ.ಗಳಿಂದ ಹದಿನೈದು ಸಾವಿರ ರೂ.ಗಳ ವರೆಗೆ ಕ್ಯಾಪಿಟೇಷನ್ ಶುಲ್ಕವನ್ನು ವಸೂಲು ಮಾಡಲಾಗುತ್ತಿದೆ ಎಂದು ಶ್ರೀ ಕಲಮನಕರ್ ಆಪಾದಿಸಿದ್ದರು.