ಮುಜೀಬ್ ಜೀವಂತ, ಸುರಕ್ಷಿತ ನವದೆಹಲಿ, ಏ. 23– ಬಂಗಬಂಧು ಮುಜೀಬುರ್ ರಹಮಾನ್ರವರು ‘ಜೀವಂತವಾಗಿದ್ದಾರೆ. ಸುರಕ್ಷಿತ ಸ್ಥಳವೊಂದರಲ್ಲಿದ್ದಾರೆ’ ಎಂದು ಅವರ ಡ್ರೈವರ್, ಪಾಕಿಸ್ತಾನ್ ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರದೇಶ ಶಾಸನಸಭೆಯ ಕೆಲವು ಸದಸ್ಯರಿಗೆ ತಿಳಿಸಿದ್ದಾನೆ.
ಶಾಸಕರುಗಳಾದ ಸದಾಖತ್ ಹುಸೇನ್, ನುರ್–ಉಲ್–ಇಸ್ಲಾಂ ಮತ್ತು ವಾಲಿ–ಉಲ್–ರಹಮಾನ್ರವರು ಈ ವಿಚಾರವನ್ನು ಈ ತಿಂಗಳ ಮೊದಲಲ್ಲಿ ಗೋಲ್ವಾರ ಜಿಲ್ಲೆಯಲ್ಲಿ ಅವರನ್ನು ಭೇಟಿ ಮಾಡಿದ್ದ ಅಸ್ಸಾಂನ ಪುನರ್ವಸತಿ ಶಾಖೆ ಸಚಿವ ಸಾಧನರಂಜನ್ ಸರ್ಕಾರ್ರವರಿಗೆ ತಿಳಿಸಿದರು. ಇಂದು ಇಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಸರ್ಕಾರ್ರವರು ಈ ವಿಚಾರ ತಿಳಿಸಿದರು.
ರಷ್ಯಾದಿಂದ ಮೂವರು ಯಾತ್ರಿಗಳ ಮತ್ತೊಂದು ನೌಕೆ ಬಾಹ್ಯಾಕಾಶಕ್ಕೆ
ಮಾಸ್ಕೊ, ಏ. 23– ನಾಲ್ಕು ದಿನಗಳ ಹಿಂದೆ ಅಂತರಿಕ್ಷಕ್ಕೆ ಪ್ರಯೋಗಿಸಿದ ಸ್ವಯಂಚಾಲಿತ ‘ಸೆಲ್ಯೂಟ್’ ಬಾಹ್ಯಾಕಾಶ ನಿಲ್ದಾಣದ ಜತೆ ಸೇರಿಕೊಳ್ಳುವುದಕ್ಕಾಗಿ ಇಂದು ಮುಂಜಾನೆ ಮೂವರು ಗಗನಯಾತ್ರಿಗಳಿದ್ದ ‘ಸೋಯುಜ್–19’ ಆಕಾಶನೌಕೆಯೊಂದನ್ನು ರಷ್ಯಾ ಪ್ರಯೋಗಿಸಿತೆಂದು ‘ತಾಸ್’ ಸುದ್ದಿಸಂಸ್ಥೆ ಇಂದು ಪ್ರಕಟಿಸಿತು.
‘ಸೆಲ್ಯೂಟ್‘ ಜತೆ ಸಂಪರ್ಕ ಕಲ್ಪಿಸಿಕೊಂಡು ಜಂಟಿ ಪ್ರಯೋಗಗಳನ್ನು ಕೈಗೊಳ್ಳುವ ‘ಸೋಯುಜ್–10’ರಲ್ಲಿ ಕಮಾಂಡರ್ ವಾಲ್ಡಿಮೀರ್ ಷಟ್ಲಾವ್ (43), ಫ್ಲೈಟ್ ಎಂಜಿನಿಯರ್ ಅಲೆಕ್ಸಿ ಯಲಿಸೇವ್ (36) ಮತ್ತು ಟೆಸ್ಟ್ ಎಂಜಿನಿಯರ್ ನಿಕೋಲಾಯ್ ರುಕಾವಿಸ್ನಿಕಾವ್ ಇದ್ದಾರೆ.