ಬೆಂಗಳೂರು, ಜೂನ್ 27– ಮಲಪ್ರಭಾ ನದಿಗೆ ಭಾರಿ ಮಳೆಯ ಪರಿಣಾಮ ಮಹಾಪೂರ್ ಬಂದು ಬೆಳಗಾವಿ ಜಿಲ್ಲೆಯ 33 ಗ್ರಾಮಗಳಿಗೆ ಗಂಡಾಂತರ ಪರಿಸ್ಥಿತಿ ಉಂಟಾಗಿದೆ ಎಂದು ಇಲ್ಲಿಗೆ ಬಂದ ಅಧಿಕೃತ ವರದಿಗಳಿಂದ ತಿಳಿದುಬಂದಿದೆ.
ಈ ಎಲ್ಲ ಹಳ್ಳಿಗಳನ್ನು ತೆರವು ಮಾಡಬೇಕೆಂದು ಅಲ್ಲಿನ ನಿವಾಸಿಗಳಿಗೆ ಸರ್ಕಾರ ಆದೇಶ ನೀಡಿದೆ. ಆರು ಹಳ್ಳಿಗಳು ಮುಳುಗಡೆ ಪರಿಸ್ಥಿತಿಗೆ ಗುರಿಯಾಗಿದ್ದು, ಇನ್ನು 24 ಗಂಟೆಗಳಲ್ಲಿ ತೆರವು ಮಾಡಬೇಕೆಂದು ಗ್ರಾಮ ನಿವಾಸಿಗಳಿಗೆ ಆದೇಶ ನೀಡಲಾಗಿದೆ.
ನಗರ ಆಸ್ತಿ ವಿಲೇವಾರಿ ವಿರುದ್ಧ ಸರ್ಕಾರದ ಕ್ರಮ
ಬೆಂಗಳೂರು, ಜೂನ್ 27– ನಗರ ಆಸ್ತಿಗೆ ಎರಡು ಲಕ್ಷ ರೂ. ಮಿತಿ ವಿಧಿಸಬೇಕೆಂಬಯತ್ನವನ್ನು ತಪ್ಪಿಸಿಕೊಳ್ಳಲು ಹಲವು ಶ್ರೀಮಂತರು ಮಿತಿಗೆ ಮೀರಿದ ಆಸ್ತಿ ವಿಲೇವಾರಿ ಮಾಡುತ್ತಿರುವುದಕ್ಕೆ ತಡೆ ಹಾಕುವ ಬಗ್ಗೆ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳುವ ಸಂಭವವಿದೆ.
ಈ ವಿಚಾರವನ್ನು ಇಂದು ವರದಿಗಾರರೊಡನೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಶ್ರಿ ಡಿ.ದೇವರಾಜ ಅರಸ್ ಅವರು ಪರೋಕ್ಷವಾಗಿ ಸೂಚಿಸಿದರು.