ನವದೆಹಲಿ, ಮಾರ್ಚ್ 24– ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುವ ರಾಷ್ಟ್ರವ್ಯಾಪಕ ಕಾರ್ಯಕ್ರಮಕ್ಕೆ 50 ಕೋಟಿ ರೂಪಾಯಿಗಳನ್ನು ಒದಗಿಸಿರುವುದಾಗಿ ಇಂದು ಲೋಕಸಭೆಯಲ್ಲಿ ತಾತ್ಕಾಲಿಕ ಆಯವ್ಯಯವನ್ನು ಮಂಡಿಸಿದ ಕೇಂದ್ರ ಹಣಕಾಸು ಮಂತ್ರಿ ಶ್ರೀ ವೈ.ಬಿ.ಚವಾಣ್ ಹೇಳಿದರು.
1971–72ನೇ ಸಾಲಿನ ಈ ತಾತ್ಕಾಲಿಕ ಆಯವ್ಯಯದಲ್ಲಿ ಯಾವ ಹೊಸ ತೆರಿಗೆಗಳನ್ನೂ ಸೂಚಿಸಿಲ್ಲ. ಒಟ್ಟು 240 ಕೋಟಿ ರೂಪಾಯಿಗಳ ಕೊರತೆ ಇರುವುದೆಂದು ಸಚಿವರು ಅಂದಾಜು ಮಾಡಿದ್ದಾರೆ.
ಓಟ್ ಆನ್ ಅಕೌಂಟ್ ಅನ್ನು ಸೂಚಿಸುವುದೇ ಇಂದು ತಮ್ಮ ಉದ್ದೇಶ ಮಾತ್ರವಾಗಿದೆ ಎಂದು ಕೇಂದ್ರ ಅರ್ಥ ಸಚಿವರು ಹೇಳಿದರು.
ರಾಜ್ಯದಲ್ಲಿ ಸಂಯುಕ್ತರಂಗ ಸರ್ಕಾರ ರಚನೆಗೆ ಯತ್ನ
ಬೆಂಗಳೂರು, ಮಾರ್ಚ್ 24– ಸಂಸ್ಥಾ ಕಾಂಗ್ರೆಸ್ ಪಕ್ಷ ಹಾಗೂ ವಿಧಾನಸಭೆಯ ಕಾಂಗ್ರೆಸ್ಸೇತರ ಪಕ್ಷಗಳು ಸೇರಿ ಬಹುಮತ ಬಲ ಕೂಡಿಕೆ ಸಾಧ್ಯವಾಗಿ ಒಪ್ಪಂದಕ್ಕೆ ಬಂದಲ್ಲಿ ರಾಜ್ಯದಲ್ಲಿ ಸಂಯುಕ್ತರಂಗದ ಸರ್ಕಾರ ರಚಿಸಲು ಪ್ರಯತ್ನಗಳು ನಡೆಯುತ್ತಿವೆ.
ಆಡಳಿತ ಕಾಂಗ್ರೆಸ್ಸಿಗೇ ಸೇರಿದ್ದು ವಾಪಸಾಗಿರುವವರು ಬೆಂಬಲ ನೀಡುವರೆಂದು ನಿರೀಕ್ಷಿಸಲಾಗಿರುವ ಕಾಂಗ್ರೆಸ್ಸೇತರ ಪಕ್ಷಗಳ ಸದಸ್ಯರು ಹಾಗೂ ಸಂಸ್ಥಾ ಕಾಂಗ್ರೆಸ್ ಪಕ್ಷದ ಸದಸ್ಯರು ಸೇರಿದ ಸಂಖ್ಯೆ 103ಕ್ಕೇರಿದೆಯೆಂದು ಸಂಸ್ಥಾ ಕಾಂಗ್ರೆಸ್ ಪಕ್ಷದ ವಕ್ತಾರರೊಬ್ಬರು ರಾತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.