ಪ್ರಸ್ತುತ ವಿಧಾನಸಭೆ ಅಧಿವೇಶನದಲ್ಲೇ ತೀವ್ರ ಭೂಸುಧಾರಣೆ ಶಾಸನ
ನವದೆಹಲಿ, ಏ. 11– ಪ್ರಸ್ತುತ ವಿಧಾನ ಮಂಡಲ ಅಧಿವೇಶನದಲ್ಲೇ ತೀವ್ರ ಭೂ ಸುಧಾರಣೆ ಶಾಸನವನ್ನು ಮಂಡಿಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಆದೇಶ ನೀಡಿದೆ.
ಭೂಸುಧಾರಣೆ ಶಾಸನವನ್ನು ಸೆಲೆಕ್ಟ್ ಸಮಿತಿಗೆ ವಹಿಸಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ‘ಪ್ರಸ್ತುತ ಅಧಿವೇಶನದೊಳಗೇ ಸೆಲೆಕ್ಟ್ ಸಮಿತಿ ವರದಿ ಪಡೆದು ಶಾಸನಕ್ಕೆ ವಿಧಾನಮಂಡಲದ ಒಪ್ಪಿಗೆ ಪಡೆಯಿರಿ’ ಎಂದೂ ತಿಳಿಸಿದೆ.
ಕೇಂದ್ರ ಕೃಷಿ ಶಾಖೆ ಸಚಿವ ಎ.ಪಿ. ಶಿಂಧೆಯವರು ಇಂದು ಕಾಂಗ್ರೆಸ್ ಸಂಸತ್ ಪಕ್ಷದ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ಇದನ್ನು ತಿಳಿಸಿದರು.
‘ರಾಜ್ಯದಲ್ಲಿ ಇಂದಿರಾ ಕೈಗೊಂಬೆ ಸರ್ಕಾರ’
ಬೆಂಗಳೂರು, ಏ. 11– ‘ರಾಜ್ಯದಲ್ಲಿ ಶ್ರೀಮತಿ ಇಂದಿರಾ ಗಾಂಧಿ ಅವರ ಕೈಗೊಂಬೆ ಸರ್ಕಾರ ಸ್ಥಾಪನೆಯಾಗಿದೆ’ ಎಂದು ಸೋಷಲಿಸ್ಟ್ ಪಕ್ಷದ ಸದಸ್ಯ ಶ್ರೀ ಎಸ್. ಬಂಗಾರಪ್ಪ ಅವರು ಇಂದು ವಿಧಾನಸಭೆಯಲ್ಲಿ ಆಪಾದಿಸಿ, ‘ರಾಜ್ಯವು ಹೆಚ್ಚಿನ ಸ್ವಾಯತ್ತತೆ ಪಡೆಯಲು’ ಕರೆಯಿತ್ತರು.
ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸಬೇಕೆಂಬ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.