ಮಳೆಯಾಗಿರುವ ಬಗೆಗೆ ಅರಸು ಹರ್ಷ: ಪರಿಹಾರ ಕಾರ್ಯ ನಿಲ್ಲಿಸದಿರುವ ಸಲಹೆ
ಬೆಂಗಳೂರು, ಆಗಸ್ಟ್ 26– ಹೆಚ್ಚು ಕಡಿಮೆ ರಾಜ್ಯದ ಎಲ್ಲ ಕಡೆಗಳಲ್ಲಿ ಮಳೆ ಬಿದ್ದಿರುವ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ ಆಡಳಿತ ಕಾಂಗ್ರೆಸ್ಸಿನ ಪ್ರದೇಶ ಸಮಿತಿ ಅಧ್ಯಕ್ಷ ಡಿ. ದೇವರಾಜ ಅರಸು ಅವರು, ‘ಈ ಮಳೆ ಕಾರಣ ಪರಿಹಾರ ಕಾರ್ಯಗಳನ್ನು ನಿಲ್ಲಿಸಬಾರದು’ ಎಂದು ಸರ್ಕಾರಕ್ಕೆ ಸಲಹೆ ಮಾಡಿದರು.
‘ಈ ಮಳೆಯಿಂದಾಗಿ 15 ದಿನ ಅಥವಾ ಒಂದು ತಿಂಗಳ ಕಾಲ ರೈತ ಕಾರ್ಮಿಕರು ಕೃಷಿ ಚಟುವಟಿಕೆಗಳಿಗೆ ಗಮನ ಕೊಡಬಹುದು. ಪರಿಹಾರ ಕಾರ್ಯ ಅಗತ್ಯವಾಗುವ ಕಾಲ ಮತ್ತೆ ಉಂಟಾಗಬಹುದು. ಈ ಅಂಶವನ್ನು ಸರ್ಕಾರ ಗಮನದಲ್ಲಿಡಬೇಕು’ ಎಂದು ಅವರು ಹೇಳಿದರು.
ಚೀನಾಕ್ಕೆ ರಷ್ಯಾದ ದಾಳಿ ಭೀತಿ, ತೀವ್ರ ಕಳವಳ
ಹಾಂಕಾಂಗ್, ಆಗಸ್ಟ್ 26– ರಷ್ಯಾ ತನ್ನ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆಯೆಂದು ಕಳವಳಗೊಂಡಿರುವ ಕಮ್ಯುನಿಸ್ಟ್ ಚೀನಾ ರಕ್ಷಣಾ ಸಿದ್ಧತೆಗಳಲ್ಲಿ ತೊಡಗಿದೆ.
ಬೀಜಿಂಗ್ ಮತ್ತಿತರ ಪ್ರಮುಖ ನಗರಗಳಲ್ಲಿ ರಕ್ಷಣಾ ಸಿದ್ಧತೆಗಳು ಭರದಿಂದ ನಡೆದಿವೆಯೆಂದು ಚೀನಾದಲ್ಲಿ ಏಳು ವಾರಗಳ ಪ್ರವಾಸ ಮುಗಿಸಿ ಇಂದು ಇಲ್ಲಿಗೆ ಆಗಮಿಸಿದ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಬರಹಗಾರರಾದ ಅಮೆರಿಕದ ಪತ್ರಕರ್ತ ಜೇಮ್ಸ್ ಅವರು ಇಂದು ತಿಳಿಸಿದರು.