‘ಒಪ್ಪಿಗೆ ದೊರೆಯದಿದ್ದ’ ಕಾವೇರಿ ಯೋಜನೆಗೆ ಕೇಂದ್ರ ಸರ್ಕಾರದ ನೆರವು
ನವದೆಹಲಿ, ಫೆ. 22– ಒಪ್ಪಿಗೆ ದೊರೆಯದಿದ್ದ ಮೈಸೂರಿನ ಕಾವೇರಿ ಯೋಜನೆಗಳಿಗೆ 1972–73ರಲ್ಲಿ ರಾಜ್ಯದ ಯೋಜನಾ ಮಿತಿ ಹೊರಗಡೆ ಹಣಕಾಸು ನೆರವು ನೀಡಿಕೆ ಮುಂದುವರಿಯುವುದು.
ಮೈಸೂರು ರಾಜ್ಯಪಾಲ ಮೋಹನ್ ಲಾಲ್ ಸುಖಾಡಿಯಾ ಹಾಗೂ ಕೇಂದ್ರ ಯೋಜನಾ ಸಚಿವ ಶ್ರೀ ಸಿ. ಸುಬ್ರಹ್ಮಣ್ಯಂ ಅವರ ನಡುವೆ ಇಂದು ನಡೆದ ಮಾತುಕತೆಯಲ್ಲಿ ಈ ಬಗ್ಗೆ ಒಪ್ಪಂದವಾಯಿತು.
ದೆಹಲಿಯಿಂದ ಹೊರಟ ಜರ್ಮನ್ ವಿಮಾನ ಏಡನ್ಗೆ ಅಪಹರಣ: 172 ಪ್ರಯಾಣಿಕರ ಬಿಡುಗಡೆ
ಏಡನ್, ಫೆ. 22– ಪಶ್ಚಿಮ ಜರ್ಮನಿಯ ಅಪಹೃತ ಲುಫ್ತಾನ್ಸಾ ಜಂಬೋಜೆಟ್ ವಿಮಾನದಲ್ಲಿದ್ದ ಎಲ್ಲ 172 ಜನ ಪ್ರಯಾಣಿಕರೂ ಬಿಡುಗಡೆಯಾಗಿರುವುದಾಗಿ ಏಡನ್ ವಿಮಾನ ನಿಲ್ದಾಣದ ಡೈರೆಕ್ಟರ್ ಇಂದು ತಿಳಿಸಿದರು.
ಆದರೆ, ವಿಮಾನ ಅಪಹರಿಸಿದವರು ತಮ್ಮ ಒತ್ತಾಯಗಳ ಪೂರೈಕೆಯಾಗುವವರೆಗೆ ಚಾಲಕ ವರ್ಗದ 16 ಜನರನ್ನು ತಮ್ಮ ವಶದಲ್ಲಿಟ್ಟುಕೊಂಡಿರುತ್ತಾರೆ ಎಂದು ಅವರು ಅಧಿಕೃತ ಹೇಳಿಕೆಯೊಂದರಲ್ಲಿ ಪ್ರಕಟಿಸಿದರು.
ಬಿಡುಗಡೆಯಾದವರಲ್ಲಿ ದಿವಂಗತ ಸೆನೆಟರ್ ರಾಬರ್ಟ್ ಕೆನಡಿ ಅವರ 19 ವರ್ಷದ ಮಗ ಜೋಸೆಫ್ ಕೆನಡಿ ಅವರೂ ಒ ಬ್ಬರು.
ಅಥೆನ್ಸ್ಗೆ ಹೋಗಬೇಕಾಗಿದ್ದ ವಿಮಾನವು ನವದೆಹಲಿಯಿಂದ ಪ್ರಯಾಣದ ಮಾಡಿದ ನಲವತ್ತು ನಿಮಿಷಗಳ ನಂತರ ಬಲಾತ್ಕಾರ ಅಪಹರಣಕ್ಕೊಳಗಾಗಿ ಇಂದು ಬೆಳಿಗ್ಗೆ 9 ಗಂಟೆಗೆ ಏಡನ್ನಲ್ಲಿ ಸುರಕ್ಷಿತವಾಗಿ ಇಳಿಯಿತು.