ಒಡೆತನ ನಿರ್ಧಾರದ ತನಕ ಉಭಯ ಕಾಂಗ್ರೆಸ್ ಸ್ವಾಧೀನಕ್ಕೆ ಅವಕಾಶ
ಬೆಂಗಳೂರು, ಅಕ್ಟೋಬರ್ 23– ವಿವಾದ ಗ್ರಸ್ಥವಾದ ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಸ್ವಾಧೀನದ ಹಕ್ಕು ಸಿವಿಲ್ ನ್ಯಾಯಾಲಯದಲ್ಲಿ ತೀರ್ಮಾನವಾಗುವವರೆಗೆ ಉಭಯ ಕಾಂಗ್ರೆಸ್ ಪಕ್ಷಗಳು ಭವನದ ಒಂದೊಂದು ಭಾಗವನ್ನು ಹಂಗಾಮಿಯಾಗಿ ಸ್ವಾಧೀನಕ್ಕೆ ಪಡೆಯುವಂತೆ ಸಬ್ಡಿವಿಜನಲ್ ಮ್ಯಾಜಿಸ್ಟ್ರೇಟ್ ನರೇಂದ್ರ ಸಿಂಗ್ ಅವರು ತೀರ್ಪು ನೀಡಿದ್ದಾರೆ.
ಅವರ ತೀರ್ಪಿನ ಪ್ರಕಾರ, ಆಡಳಿತ ಕಾಂಗ್ರೆಸ್ಗೆ ಪೀಠೋಪಕರಣಗಳು, ಭವನದ ಎಡಭಾಗಮತ್ತು ಸೆಂಟ್ರಲ್ಹಾಲ್ ದೊರೆತಿದ್ದರೆ, ಸಂಸ್ಥಾ ಕಾಂಗ್ರೆಸ್ಗೆ ನೆಲಮಟ್ಟದ ಕಟ್ಟಡದ ಬಲಬದಿ, ಪೂರ್ಣವಾಗಿ ಪ್ರಥಮ ಮಹಡಿ ಹಾಗೂ ಪಕ್ಕದ ಕಟ್ಟಡ ದೊರೆತಿದೆ.
ಭುಟ್ಟೋ ‘ಅಪನಂಬಿಕಸ್ಥ’:ಗಡಿನಾಡು ಗಾಂಧಿ ಟೀಕೆ
ನವದೆಹಲಿ, ಅಕ್ಟೋಬರ್ 23– ಪಾಕಿಸ್ತಾನದ ಅಧ್ಯಕ್ಷ ಜಡ್.ಎ. ಭುಟ್ಟೋ ಅವರು ಅಪನಂಬಿಕಯುಳ್ಳ ವ್ಯಕ್ತಿ ಎಂದು ಖುದಾಯಿ ಖಿದ್ಮಗರ್ ನಾಯಕ ಖಾನ್ ಅಬ್ದುಲ್ ಗಫಾರ್ ಖಾನ್ ಅವರು ಆಪಾದಿಸಿದ್ದಾರೆ.
ಜನತೆಯ ಸಮಸ್ಯೆಗಳನ್ನು ಪರಿಷ್ಕರಿಸಲು ಎಲ್ಲ ಸಹಕಾರ ನೀಡುವುದಾಗಿ ತಾವು ಸದುದ್ದೇಶದಿಂದ ತಿಳಿಸಿದ್ದರೂ, ತಮ್ಮ ಸೂಚನೆಯನ್ನು ಭುಟ್ಟೋ ಅವರು ‘ಲಂಡನ್ ಯೋಜನೆ’ ಎಂದು ಶಂಕಿಸಿದ್ದಾರೆಂದೂ, ತಮ್ಮನ್ನು ಬಲೂಚಿಸ್ತಾನ ಜನತೆ ಆಹ್ವಾನಿಸಿ ದ್ದಾಗಲೂ ತಮ್ಮ ವಿರುದ್ಧ ದೋಷಾರೋಪಣೆ ಹೊರಿಸಲಾಯಿತೆಂದೂ 90 ವರ್ಷದ ಪಖ್ತೂನಿ ನಾಯಕ ಗಫಾರ್ ಖಾನ್ ತಿಳಿಸಿದ್ದಾರೆ.