ಬಾಂಗ್ಲಾದೇಶಕ್ಕೆ ಮಾನ್ಯತೆ ವಿಳಂಬದಿಂದ ಯುದ್ಧ ಕೈದಿಗಳ ವಾಪಸಿಗೆ ಅಡ್ಡಿ: ಮುಜೀಬುರ್
ನವದೆಹಲಿ, ಅಕ್ಟೋಬರ್25– ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡಿರುವುದನ್ನು ವಿಳಂಬಗೊಳಿಸಿ ಪಾಕಿಸ್ತಾನವೇ ತನ್ನ ಯುದ್ಧ ಕೈದಿಗಳ ವಾಪಸಿಗೆ ಅಡ್ಡಿಯಾಗು ತ್ತಿದೆ ಎಂದು ಬಾಂಗ್ಲಾದೇಶದ ಪ್ರಧಾನಿ ಷೇಖ್ ಮುಜೀಬುರ್ ರಹಮಾನ್ ಅವರು ತಿಳಿಸಿದರು.
ಉಪಖಂಡದಲ್ಲಿ ಮೂಡಿರುವ ವಾಸ್ತವಿಕತೆಯನ್ನು ಅಂಗೀಕರಿಸುವುದರ ಆಧಾರದ ಮೇಲೆಯೇ ಪಾಕಿಸ್ತಾನ– ಬಾಂಗ್ಲಾ ದೇಶ ಬಾಂಧವ್ಯ ನಿಂತಿದೆಯೆಂದೂ ಅವರು ಢಾಕಾದಲ್ಲಿ ತಮ್ಮನ್ನು ಸಂದರ್ಶಿಸಿದ ಕರಾಚಿಯ ‘ಡಾನ್’ ಪತ್ರಿಕೆಯ ಪ್ರತಿನಿಧಿಗಳಿಗೆನೀಡಿದ ಲಿಖಿತ ಉತ್ತರದಲ್ಲಿ ಸ್ಪಷ್ಟವಾಗಿ ಘೋಷಿಸಿದ್ದಾರೆ.
ಮುಂದಿನ ಸುಗ್ಗಿಯಿಂದ ದಪ್ಪಕ್ಕಿ ಬೆಲೆಕೆ.ಜಿ.ಗೆ ಒಂದು ರೂಪಾಯಿ
ಬೆಂಗಳೂರು, ಅಕ್ಟೋಬರ್25– ಮುಂದಿನ ಸುಗ್ಗಿಯಿಂದ ಮಾರುಕಟ್ಟೆಯಲ್ಲಿ ದೊರೆಯುವ ಹೆಚ್ಚುವರಿ ಭತ್ತವನ್ನು ಸರ್ಕಾರ ಕೊಳ್ಳುವ ಪರಿಣಾಮವಾಗಿ ರಾಜ್ಯದ 1 ಕೋಟಿ ಜನರಿಗೆ ಅಕ್ಕಿ ಕೆ.ಜಿ. ಒಂದಕ್ಕೆ ಒಂದು ರೂಪಾಯಿನಿಂದ 1.30ರೂ. ಬೆಲೆಗೆ ದೊರೆಯಲಿದೆ.
ಇಂದು ನಡೆದ ಮಂತ್ರಿ ಮಂಡಲದ ಸಭೆ ಭತ್ತದ ಸಗಟು ವ್ಯಾಪಾರವನ್ನು ವಹಿಸಿಕೊಳ್ಳುವ ಪ್ರಮುಖ ನಿರ್ಧಾರವನ್ನು ಕೈಗೊಂಡಿತು.