ಮೈಸೂರು, ಮಹಾರಾಷ್ಟ್ರ, ಆಂಧ್ರ ನಡುವೆ ಸಾರಿಗೆ ಸಂಬಂಧ ಯಶಸ್ವೀ ಒಪ್ಪಂದ
ಬೆಂಗಳೂರು, ಜೂನ್ 17– ಸರ್ಕಾರಿ ಬಸ್ಸುಗಳ ಮತ್ತು ಲಾರಿಗಳ ಅಂತರ್ರಾಜ್ಯ ಸಾರಿಗೆ ಸಂಬಂಧದಲ್ಲಿ ಕಳೆದ ಹಲವು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿದ್ದ ಹಲವು ವಿಷಯಗಳ ಬಗ್ಗೆ ಮೈಸೂರು, ಆಂಧ್ರ ಮತ್ತು ಮಹಾರಾಷ್ಟ್ರ ಸಾರಿಗೆ ಸಚಿವರುಗಳು ಇಂದು ಯಶಸ್ವೀ ಒಪ್ಪಂದಕ್ಕೆ ಬಂದರು.
ಒಪ್ಪಂದದ ಒಂದು– ಅಂಶದ ಪ್ರಕಾರ ಆಂಧ್ರ ಮತ್ತು ಮಹಾರಾಷ್ಟ್ರಕ್ಕೆ ತಾಗಿಕೊಂಡಿರುವ 50 ಕಿಲೋ ಮೀಟರುಗಳಿದ್ದ ಬಿದರೆ ದಾರಿಯಲ್ಲಿ ಇನ್ನು ಮುಂದೆ ಎರಡು ರಾಜ್ಯಗಳ ವಾಹನಗಳು ಓಡಾಡಬಹುದು. ಆಂಧ್ರದ ವಾಹನವೊಂದಕ್ಕೆ ವರ್ಷಕ್ಕೆ 1,000 ರೂಪಾಯಿಗಳಂತೆ ಹತ್ತು ಲಕ್ಷ ರೂಪಾಯಿಗಳ ಅಧಿಕ ವರಮಾನ ಮೈಸೂರಿಗೆ ಬರಲಿದೆ.
ಗ್ರಾಮಾಂತರ ಸೇವೆಗೆ ವೈದ್ಯರ ನಿಯೋಜನೆ
ಬೆಂಗಳೂರು. ಜೂನ್ 17– ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವೈದ್ಯರಿಗೆ ಆಸಕ್ತಿ ಇಲ್ಲ.
ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುವಂತೆ ಈಚೆಗೆ ಸರ್ಕಾರ ನಿರೂಪಿಸಿದ ಆಕರ್ಷಕ ಯೋಜನೆ ರೀತ್ಯ ಪ್ರಕಟಿಸಲಾದ ಇನ್ನೂರ ಐವತ್ತು ಹುದ್ದೆಗಳಿಗೆ ಕೇವಲ 10 ಮಂದಿ ವೈದ್ಯರು ಅರ್ಜಿ ಹಾಕಿರುವುದೇ ಇದಕ್ಕೆ ನಿದರ್ಶನ.
ರಾಜ್ಯದ ಆರೋಗ್ಯ ಇಲಾಖೆಯ ಡೈರೆಕ್ಟರ್ ಡಾ. ಪಿ.ಆರ್. ದೇಸಾಯಿ ಅವರು ಇಂದು ವಿಷಯವನ್ನು ‘ಪ್ರಜಾವಾಣಿ’ಗೆ ತಿಳಿಸಿ ವೈದ್ಯರ ಒಲವು ನಗರದತ್ತ ಇದೆಯೇ ಹೊರತು ಗ್ರಾಮೀಣ ಪ್ರದೇಶದ ಕಡೆಗಲ್ಲ ಎಂದು ಹೇಳಿದರು.
ವೈದ್ಯರು ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಲು ಹಾಗೂ ಕ್ರಮೇಣ ಅವರು ಹಳ್ಳಿಗಳಲ್ಲಿ ಸ್ವತಂತ್ರವಾಗಿ ವೃತ್ತಿ ಆರಂಭಿಸಲು ಸಾಧ್ಯವಾಗುವಂತೆ ರಾಜ್ಯ ಸರ್ಕಾರ ಕೇಂದ್ರದ ಸಹಕಾರದೊಂದಿಗೆ ಯೋಜನೆಯೊಂದನ್ನು ನಿರೂಪಿಸಿತ್ತು. ಮಾಸಿಕ 250 ರೂಪಾಯಿ ವೇತನದ ಈ ಹುದ್ದೆಗಳಿಗೆ ನೇಮಕಗೊಳ್ಳುವ ವೈದ್ಯರು ಖಾಸಗಿ ವೃತ್ತಿಯನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ.