ನವದೆಹಲಿ, ಸೆ. 26– ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಬೇಕೆಂಬ ಬೇಡಿಕೆಗೆ ಕೇಂದ್ರ ಸಂಪುಟ ಇಂದು ಒಪ್ಪಿಗೆ ನೀಡಿತೆಂದು ತಿಳಿದುಬಂದಿದೆ.
ಹೆಸರನ್ನು ಬದಲಾಯಿಸುವುದಕ್ಕೆ ಸಂಬಂಧಿಸಿದ ವಿಧೇಯಕವೊಂದನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು.
ಕೇಂದ್ರ ಸಂಪುಟವು ಇಲ್ಲಿ ಇಂದು ಈ ನಿರ್ಧಾರವನ್ನು ಕೈಗೊಂಡಿತು.
ಕರ್ನಾಟಕ ಎಂದು ರಾಜ್ಯದ ಹೆಸರು ಬದಲಾಯಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಪಡಿಸುವ ನಿರ್ಣಯವೊಂದನ್ನು ಮೈಸೂರು ವಿಧಾನಸಭೆ ಇತ್ತೀಚೆಗೆ ಅಂಗೀಕರಿಸಿತ್ತು.
ಕಾವೇರಿ ಜಲವಿವಾದ: ವಿವರಗಳ ಸಂಗ್ರಹಕ್ಕೆ ಇನ್ನೂ 3 ತಿಂಗಳು ಕಾಲಾವಕಾಶ ನೀಡಿಕೆ
ನವದೆಹಲಿ, ಸೆ. 26– ‘ಸ್ವಾತಂತ್ರ್ಯದ ರಜತೋತ್ಸವ ವರ್ಷದಲ್ಲೇ ಅಂತರರಾಜ್ಯ ನದಿ ನೀರು ವಿವಾದಗಳನ್ನು ಬಗೆಹರಿಸಲು ಕೇಂದ್ರ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸಚಿವ ಶಾಖೆ ಸಕಲ ಪ್ರಯತ್ನಗಳನ್ನೂ ನಡೆಸಿದೆ.
ಪರಸ್ಪರ ಚರ್ಚೆ ಮೂಲಕ ವಿವಾದಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಸಂಬಂಧಪಟ್ಟ ರಾಜ್ಯಗಳನ್ನು ಒತ್ತಾಯಪಡಿಸಲು ಪ್ರಧಾನಮಂತ್ರಿ ಇಂದಿರಾ ಗಾಂಧಿ ಮತ್ತು ನೀರಾವರಿ ಸಚಿವ ಕೆ.ಎಲ್. ರಾವ್ ಅವರು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ನೀರಾವರಿ ಸಚಿವ ಶಾಖೆ ವಕ್ತಾರರು ತಿಳಿಸಿದ್ದಾರೆ.