ಮಂಡ್ಯ, ಸೆ. 27– ಸಂಸ್ಥಾ ಕಾಂಗ್ರೆಸ್ಸಿನ ಭದ್ರ ನೆಲೆಗಳಲ್ಲಿ ಒಂದಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಅದರ ಹಲವು ಪ್ರಮುಖ ನಾಯಕರು ಆಡಳಿತ ಕಾಂಗ್ರೆಸ್ಸಿಗೆ ಇಂದು ಸೇರಿದ್ದರಿಂದ ರಾಜ್ಯದಲ್ಲಿ ಸಂಸ್ಥಾ ಕಾಂಗ್ರೆಸ್ಸಿಗೆ ಭಾರಿ ಪೆಟ್ಟು ಬಿದ್ದಿದೆ. ಮೈಸೂರು ಪ್ರದೇಶ ಸಂಸ್ಥಾ ಕಾಂಗ್ರೆಸ್ ಉಪಾಧ್ಯಕ್ಷರೂ ಜಿಲ್ಲೆಯ ಪ್ರಮುಖ ನಾಯಕರೂ ಮಾಜಿ ಮಂತ್ರಿಗಳೂ ಆದ ಶ್ರೀ ಕೆ.ವಿ. ಶಂಕರಗೌಡ ಮತ್ತು ಜಿಲ್ಲಾ ಸಂಸ್ಥಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಜಿ. ಮಾದೇಗೌಡ ಅವರು ಇಂದು ಆಡಳಿತ ಕಾಂಗ್ರೆಸ್ಸಿಗೆ ಸೇರಿದ ಪ್ರಮುಖರಲ್ಲಿ ಸೇರಿದ್ದಾರೆ.