ಮಂಗಳೂರು, ಡಿ. 10– ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಮುದ್ರಣಾಲಯ ಸ್ಥಾಪಿಸಿ, ಕನ್ನಡ ಮುದ್ರಣ ಮೊಳೆಗಳ ಸಂಶೋಧನೆಯಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಇಲ್ಲಿನ ಬಾಸೆಲ್ ಮಿಷನ್ ಮುದ್ರಣಾಲಯವನ್ನು ಶಾಶ್ವತವಾಗಿ ಮುಚ್ಚಲಾಗಿದೆ.
1840ರಲ್ಲಿ ಸ್ಥಾಪನೆಗೊಂಡ ಈ ಮುದ್ರಣಾಲಯ ಕಿಟ್ಟೆಲ್ ಅವರ ಖ್ಯಾತ ಕನ್ನಡ ನಿಘಂಟನ್ನು ಮುದ್ರಿಸಿ ಪ್ರಕಟಿಸಿದ್ದಲ್ಲದೆ ಕನ್ನಡದ ಹಲವು ಪ್ರಖ್ಯಾತ ಗ್ರಂಥಗಳನ್ನು ಪ್ರಕಟಿಸಿದೆ. ಕನ್ನಡ ಸಾಹಿತ್ಯ ಮತ್ತು ಲಿಪಿಗೆ ಅದು ಅಪಾರ ಸೇವೆ ಸಲ್ಲಿಸಿದೆ.
ಕೆಲಸಗಾರರು ಮತ್ತು ಮಾಲೀಕರೊಳಗಿನ ತಕರಾರಿನಿಂದ ನ. 30ರಂದು ಕೆಲಸ ನಿಲ್ಲಿಸಿದ್ದು, ಈಗ ತಿಳಿದುಬಂದಂತೆ ಮುದ್ರಣಾಲಯವನ್ನು ಶಾಶ್ವತವಾಗಿ ಮುಚ್ಚಲಾಗಿದೆ.
ವಿದೇಶದಲ್ಲಿರುವ ಭಾರತದ ವೈದ್ಯರಿಗೆ ತತ್ಕ್ಷಣ ಕೆಲಸ
ನವದೆಹಲಿ, ಡಿ. 10– ಪ್ರತಿಭಾಪಲಾಯನ ತಪ್ಪಿಸುವ ಉದ್ದೇಶದಿಂದ, ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವೈದ್ಯರಿಗೆ ತಕ್ಷಣ ಭಾರತದಲ್ಲಿ ಹಂಗಾಮಿ ಆಧಾರದ ಮೇಲೆ ಉದ್ಯೋಗ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಗಡಿ ವಿವಾದ ಇತ್ಯರ್ಥ ಕುರಿತು ಸಂಸ್ಥಾ ಕಾಂಗ್ರೆಸ್ ಭಿನ್ನಾಭಿಪ್ರಾಯ ಬಯಲು
ನವದೆಹಲಿ, ಡಿ. 10– ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥದ ಬಗ್ಗೆ ಸಂಸ್ಥಾ ಕಾಂಗ್ರೆಸ್ ಸಂಸದೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯವು ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ಇಂದು ಬಯಲಿಗೆ ಬಂದಿತು.