ಶೀಘ್ರವೇ ಅಭಿವೃದ್ಧಿ ದಳ ಅಸ್ತಿತ್ವಕ್ಕೆ ಬೆಂಗಳೂರು, ಏ. 29– ಅಮೆರಿಕದ ‘ಶಾಂತಿ ದಳ’ದ ಮಾದರಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ದಳ ಸ್ಥಾಪಿಸಬೇಕೆಂಬ ಯುವಜನ ಇಲಾಖೆಯ ಯೋಜನೆಯು ಅಂತಿಮ ಸ್ವರೂಪ ತಳೆಯುತ್ತಿದೆ.
ವಿಶೇಷ ಯೋಜನೆಗಳನ್ನು ನೋಡಿಕೊಳ್ಳಲು ಸುಮಾರು 150 ಸ್ವಯಂಸೇವಕರಿರುವ ದಳವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ದಳಕ್ಕೆ ಸೇರಲು ವಿದ್ಯಾವಂತ ಯುವಜನರಿಂದ ಹೆಚ್ಚು ಆಸಕ್ತಿ ಪ್ರಕಟವಾಗುತ್ತಿದೆ. ಸುಮಾರು 500 ಮಂದಿ ಅರ್ಜಿ ಹಾಕಿದ್ದಾರೆ ಎಂದು ವರದಿಯಾಗಿದೆ.
ತ್ರಿಭಾಷಾ ಸೂತ್ರ ಜಾರಿಗೆ ತರಲು ರಾಜ್ಯಗಳಿಗೆ ರಾಷ್ಟ್ರಪತಿ ಮನವಿ ಮದರಾಸ್, ಏ. 29– ತ್ರಿಭಾಷಾ ಸೂತ್ರವನ್ನು ಒಪ್ಪಿಕೊಳ್ಳುವಂತೆ ಹಾಗೂ ಪರಿಣಾಮಕಾರಿಯಾಗಿ ಈ ಸೂತ್ರವನ್ನು ಕಾರ್ಯಗತ ಮಾಡುವಂತೆ ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಇಂದು ಎಲ್ಲಾ ರಾಜ್ಯಗಳಿಗೂ ಮನವಿ ಮಾಡಿಕೊಂಡರು.
ಭಾಷೆ ಬಗ್ಗೆ ವಿವಾದಗಳನ್ನು ತೊಡೆದುಹಾಕಿ ಎಲ್ಲಾ ಭಾರತೀಯ ಭಾಷೆಗಳ ಅಭಿವೃದ್ಧಿಯ ರಚನಾತ್ಮಕ ಕಾರ್ಯಕ್ಕೆ ಹೆಚ್ಚು ಗಮನ ಹರಿಸುವಂತೆ ಅವರು ತಿಳಿಸಿದರು.