ಸಿಗರೇಟ್, ಪೆಟ್ರೋಲ್, ಬಟ್ಟೆ, ಬ್ರೆಡ್ ತುಟ್ಟಿ: ಭೋಗ ವಸ್ತುಗಳ ಮೇಲೆ ಹೆಚ್ಚು ಹೊರೆ
ನವದೆಹಲಿ, ಮೇ 28– ಕೇಂದ್ರ ವಿತ್ತ ಮಂತ್ರಿ ಶ್ರೀ ಯಶವಂತರಾವ್ ಚವಾಣ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 1971–72ನೇ ಸಾಲಿನ ಮುಂಗಡಪತ್ರದಲ್ಲಿ 177 ಕೋಟಿ ರೂ.ಗಳ ಹೆಚ್ಚುವರಿ ತೆರಿಗೆಯನ್ನು ವಿಧಿಸಲಾಗಿದೆ.
ಇದರ ಪರಿಣಾಮವಾಗಿ ಸಿಗರೇಟು, ಪೆಟ್ರೋಲ್, ಸಾಬೂನು, ಬಟ್ಟೆ, ಸಿದ್ಧಪಡಿಸಿದ ಉಡುಪು, ಬ್ರೆಡ್, ಡಬ್ಬಿಯಲ್ಲಿ ತುಂಬಿದ ಆಹಾರ ಮೊದಲಾದವುಗಳಿಗೆ ಜನಸಾಮಾನ್ಯರು ಇನ್ನು ಮುಂದೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.
ಚವಾಣ್ರ ಈ ನೂತನ ತೆರಿಗೆಗಳ ಪರಿಣಾಮವಾಗಿ, ಮುಂಗಡಪತ್ರದಲ್ಲಿ ಸೂಚಿಸಲಾಗಿದ್ದ 397 ಕೋಟಿ ರೂಪಾಯಿಗಳಷ್ಟು ಖೋತಾ 220 ಕೋಟಿ ರೂಪಾಯಿಗಳಿಗೆ ಇಳಿದಿದೆ.
ಬ್ಯಾಂಕುಗಳ ರಾಷ್ಟ್ರೀಕರಣ ಫಲಿತಾಂಶ ಅತೃಪ್ತಿಕರ
ನವದೆಹಲಿ, ಮೇ 28– ಬ್ಯಾಂಕುಗಳ ರಾಷ್ಟ್ರೀಕರಣದಿಂದ ಬಂದಿರುವ ಫಲಿತಾಂಶಗಳ ಬಗ್ಗೆ ತಮಗೆ ‘ಸಂಪೂರ್ಣ ತೃಪ್ತಿ’ ಉಂಟಾಗಿಲ್ಲ ಎಂದು ಲೋಕಸಭೆಯಲ್ಲಿ ಹಣಕಾಸಿನ ಸಚಿವ ವೈ.ಬಿ.ಚವಾಣರು ಇಂದು ತಿಳಿಸಿದರು.
ಬಿಭೂತಿ ಮಿಶ್ರರ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಿದ್ದ ಚವಾಣರು, ‘ತೃಪ್ತಿಕರ ಫಲಿತಾಂಶಕ್ಕೆ ಸತತ ಯತ್ನ ಅಗತ್ಯ’ ಎಂದು ಹೇಳಿದರು.