ನವದೆಹಲಿ, ನ. 17– ಪಕ್ಷಾಂತರ ಕುರಿತ ಸಮಿತಿಯ ಅಧ್ಯಕ್ಷ ಮತ್ತು ಇತರ ಆರು ಸದಸ್ಯರು ಅಂಗೀಕರಿಸಿರುವ ಸೂತ್ರಕ್ಕೆ ತಕ್ಕಂತೆ ಸಚಿವ ಸಂಪುಟದ ಗಾತ್ರವನ್ನು ಮಿತಗೊಳಿಸಲು ಸರ್ಕಾರ ಶಾಸನವೊಂದನ್ನು ತರಲು ಉದ್ದೇಶಿಸಿದೆ.
ಕೇಂದ್ರದಲ್ಲಿ ಸಚಿವರ ಸಂಖ್ಯೆ ಲೋಕಸಭೆ ಯಲ್ಲಿ ಸದಸ್ಯರ ಸಂಖ್ಯೆಯ ಶೇ 11ರಷ್ಟನ್ನು ಮೀರಬಾರದು, ವಿಧಾನಸಭೆ ಮಾತ್ರವೇ ಇರತಕ್ಕ ರಾಜ್ಯಗಳಲ್ಲಿ ಸಚಿವರ ಸಂಖ್ಯೆ ವಿಧಾನಸಭೆಯ ಸದಸ್ಯ ಸಂಖ್ಯೆಯ ಶೇ 10 ರಷ್ಟನ್ನು ಮೀರಬಾರದು. ಮೇಲ್ಮನೆ ಇರುವೆಡೆ ವಿಧಾನಸಭೆಯ ಸಂಖ್ಯೆಯ ಶೇ 11ರಷ್ಟನ್ನು ಮೀರಬಾರದು ಎಂಬುದು ಶಿಫಾರಸು.
ಧರ್ಮಸ್ಥಳ ಸಮ್ಮೇಳನ: ಸಮನ್ವಯ ಸಾಹಿತ್ಯ ಸೃಷ್ಟಿಗೆ ವಿ.ಸೀ ಕರೆ
ಮಂಗಳೂರು, ನ. 17– ‘ಪೂರ್ವ– ಪಶ್ಚಿಮ, ಉತ್ತರ– ದಕ್ಷಿಣ ಬೇರೆ ಬೇರೆ ಅಲ್ಲ. ಇವಕ್ಕೆಲ್ಲಾ ಹೊಂದುವ ಸಾಹಿತ್ಯ ಇಂದು ಹುಟ್ಟಬೇಕು’ ಎಂದು ಹಿರಿಯ ಸಾಹಿತಿ ಪ್ರೊ. ವಿ. ಸೀತಾರಾಮಯ್ಯ ಅವರು ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.