ತಲೆಯ ಮೇಲೆ ಮಲ ಒಯ್ಯುವ ಪದ್ಧತಿಯಿಂದ ಮುಕ್ತಿ: ಮನೆಗಳ ಶೌಚಸ್ಥಳ ನಿರ್ಮಾಣ ಕಡ್ಡಾಯ
ಬೆಂಗಳೂರು, ಜುಲೈ 15– ಮಲ– ಹೊಲಸನ್ನು ಜಾಡಮಾಲಿಗಳು ತಲೆಯ ಮೇಲೆ ಹೊತ್ತು ಒಯ್ಯುವುದನ್ನು ನಿಲ್ಲಿಸುವುದೇ ಅಲ್ಲದೆ ಮನೆಗಳಲ್ಲಿ ಶೌಚ ಸ್ಥಳಗಳ ನಿರ್ಮಾಣವನ್ನು ಕಡ್ಡಾಯ ಮಾಡಲು ಪುರಸಭೆಗಳಿಗೆ ಸಂಬಂಧಿಸಿದ ಶಾಸನವನ್ನು ಸೂಕ್ತವಾಗಿ ತಿದ್ದುಪಡಿ ಮಾಡಲಾಗುವುದು.
ಸ್ವಾತಂತ್ರ್ಯದ ರಜತ ಮಹೋತ್ಸವದಅಂಗವಾಗಿ ಕೈಗೊಳ್ಳುವ ಕಾರ್ಯಕ್ರಮದಂತೆ, ಶೌಚ ಸೌಕರ್ಯವಿಲ್ಲದ ಮನೆಗಳ ನಿರ್ಮಾಣಕ್ಕೆ ಲೈಸೆನ್ಸ್ ನೀಡಲಾಗುವುದಿಲ್ಲ. ಈಗಿರುವ ಮನೆಗಳೂ ಈ ಸೌಕರ್ಯ ಕಲ್ಪಿಸಿಕೊಳ್ಳಬೇಕೆಂದು ಕಡ್ಡಾಯ ಮಾಡಲಾಗುವುದು.
ದುರ್ವ್ಯವಹಾರಿ ಅಧಿಕಾರಿಗಳ ವಿರುದ್ಧ ತೀವ್ರ ಕ್ರಮ
ಬೆಂಗಳೂರು, ಜುಲೈ 15– ನಗರ ಕಾರ್ಪೊರೇಷನ್ ಆಡಳಿತದ ದುರ್ವ್ಯವಹಾರದಲ್ಲಿ ತೊಡಗಿದ್ದ ಅಧಿಕಾರಿ ಯಾರೇ ಆಗಲಿ ಅವರ ಮೇಲೆ ತೀವ್ರ ಕ್ರಮ ಕೈಗೊಳ್ಳಲಾಗುವುದೆಂದು ಪೌರಾಡಳಿತ ಸಚಿವ ಶ್ರೀ ಬಿ. ಬಸವಲಿಂಗಪ್ಪನವರು ಇಂದು ವಿಧಾನಸಭೆಯಲ್ಲಿ ಹೇಳಿದರು.
ಈಗಾಗಲೇ ಕೆಲವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಬೇರೆಯವರು ಅದರಿಂದ ತಪ್ಪಿಸಿಕೊಂಡೆವೆಂಬ ಭಾವನೆ ಹೊಂದಬೇಕಾಗಿಲ್ಲ. ವಿಜಿಲೆನ್ಸ್ ಕಮಿಷನ್ ವರದಿಯಲ್ಲಿ ಇರುವವರ ಮೇಲೆಲ್ಲಾ ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇವೆ. ನಗರಸಭೆಗೆ ಯಾರು ಲಕ್ಷಾಂತರ ರೂಪಾಯಿ ನಷ್ಟ ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದರು.
ಲಂಚದ ಚಟ ಇರುವ ಅಧಿಕಾರಿಗಳು ಹೇಗೆ ತಪ್ಪಿಸಿದರೂ ಒಂದಲ್ಲಾ ಒಂದು ರೀತಿ ಅದನ್ನು ತೆಗೆದುಕೊಳ್ಳುತ್ತಾರೆ. ಅವರನ್ನು ಹಿಡಿದು ಪೊಲೀಸರಿಗೆ ಕೊಡೋಣ ಎಂದರು.