l ರಾಜ್ಯದ ಐದನೇ ಪಂಚವಾರ್ಷಿಕ ಯೋಜನೆ: ಒಂದು ಸಾವಿರ ಕೋಟಿ ರೂ. ವೆಚ್ಚದ ಗುರಿ
ಬೆಂಗಳೂರು, ಅಕ್ಟೋಬರ್ 12– 1974–75ರಿಂದ ಆರಂಭವಾಗುವ ಐದನೇ ಪಂಚವಾರ್ಷಿಕ ಯೋಜನೆಯನ್ನು ರಾಜ್ಯದಲ್ಲಿ ಒಂದು ಸಾವಿರ ಕೋಟಿ ರೂಪಾಯಿಗಳಿಗೆ ವಿಸ್ತರಿಸುವ ಮಹತ್ತಾದ ಗುರಿಯನ್ನು ಅರ್ಥಮಂತ್ರಿ ಎಂ.ವೈ. ಘೋರ್ಪಡೆ ಅವರು ಇಟ್ಟುಕೊಂಡಿದ್ದಾರೆ.
ಈಗ ನಡೆಯುತ್ತಿರುವ ನಾಲ್ಕನೇ ಯೋಜನೆಯ ಗಾತ್ರ 376 ಕೋಟಿ ರೂಪಾಯಿಗಳು. ನೀರಾವರಿ ಹಾಗೂ ವಿದ್ಯುಚ್ಛಕ್ತಿ ಯೋಜನೆಗಳಿಗೆ ಹಿಂದೆಂದೂ ಇಲ್ಲದ ಆದ್ಯತೆ ದೊರೆಯುತ್ತಿರುವಾಗ ಯೋಜನೆಯ ಗಾತ್ರವನ್ನು ಈಗಿನದಕ್ಕಿಂತ ತ್ರಿಗುಣಗೊಳಿಸುವುದು ಕಷ್ಟವೇನಲ್ಲ ಎಂಬ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ.
l ಕ್ಷಮೆ ಕೇಳಲು ಎಂ.ಜಿ.ಆರ್. ನಕಾರ: ರಾಜಿ ಯತ್ನ ವಿಫಲ
ಮದ್ರಾಸ್, ಅಕ್ಟೋಬರ್ 12– ಡಿ.ಎಂ.ಕೆ. ಪಕ್ಷದ ಖಜಾಂಚಿ, ನಟ ಎಂ.ಜಿ. ರಾಮಚಂದ್ರನ್ ಅವರು ತಾವು ನೀಡಿದ ಹೇಳಿಕೆಗಳಿಗಾಗಿ ಕ್ಷಮೆ ಯಾಚಿಸಲು ನಿರಾಕರಿಸಿದ್ದರಿಂದ ಪಕ್ಷದ ಹೈಕಮ್ಯಾಂಡ್ ಮತ್ತು ಅವರ ನಡುವೆ ರಾಜಿ ಕುದುರಿಸುವ ಪ್ರಯತ್ನ ವಿಫಲವಾಗಿದೆ.
‘ಕ್ಷಮೆ ಕೇಳಬೇಕಾಗಿರುವುದು ನಾನಲ್ಲ. ತಪ್ಪು ಮಾಡಿರುವ ಪಕ್ಷ ಕ್ಷಮೆ ಯಾಚಿಸಬೇಕು’ ಎಂದು ಎಂ.ಜಿ.ಆರ್. ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.