ಮುಲ್ಕಿ ವಿರುದ್ಧ ಆಂಧ್ರ ಬಂದ್: 3 ಕಡೆ ಗೋಲಿಬಾರ್– 13 ಜನರ ಸಾವು
ಹೈದರಾಬಾದ್, ನ. 21– ಮುಲ್ಕಿ ನಿಯಮಗಳನ್ನು ರದ್ದುಪಡಿಸಬೇಕೆಂದು ಆಗ್ರಹಪಡಿಸಲು ಇಂದು ಬಂದ್ ಆಚರಿಸಿದ ಆಂಧ್ರ ವಲಯದಲ್ಲಿ, ಪೊಲೀಸರು ಚಳವಳಿಕಾರರ ಮೇಲೆ ಗುಂಡು ಹಾರಿಸಿದ ಪರಿಣಾಮವಾಗಿ ಒಟ್ಟು 13 ಮಂದಿ ಮೃತಪಟ್ಟರು.
ಪ್ರಕಾಶಂ ಜಿಲ್ಲೆಯ ಕೇಂದ್ರವಾದ ಒಂಗೋಲ್, ಗುಂಟೂರು ಜಿಲ್ಲೆಯ ತೆನಾಲಿ ಮತ್ತು ಕರ್ನೂಲ್ ಜಿಲ್ಲೆಯ ಆದವಾನಿಯಲ್ಲಿ ಗೋಲಿಬಾರ್ ನಡೆಯಿತು. ಒಂಗೋಲ್ನಲ್ಲಿ ಮೂವರು ಮೃತಪಟ್ಟು, ಒಬ್ಬರು ಗಾಯಗೊಂಡರು. ತೆನಾಲಿಯಲ್ಲಿ ನಾಲ್ವರು ಮತ್ತು ಆದವಾನಿಯಲ್ಲಿ ಐದು ಮಂದಿ ಮೃತಪಟ್ಟರು.
10 ಸಾವಿರ ಮಂದಿ ಬಂಗಾಳಿಗಳ ಬಿಡುಗಡೆಗೆ ಪಾಕ್ ನಿರ್ಧಾರ
ನವದೆಹಲಿ, ನ. 21– ಬಾಂಗ್ಲಾ ದೇಶದ ವಿಮೋಚನೆಯಾದಾಗಿನಿಂದ ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಹತ್ತು ಸಾವಿರ ಮಂದಿ ಬಂಗಾಳಿ ಸ್ತ್ರೀಯರು ಮತ್ತು ಮಕ್ಕಳನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಎಂದು ಅಧಿಕೃತ ವಕ್ತಾರರೊಬ್ಬರು ಇಂದು ರಾವಲ್ಪಿಂಡಿಯಲ್ಲಿ ತಿಳಿಸಿದರು.