ಪ್ರತ್ಯೇಕತಾವಾದಿಗಳ ತೀವ್ರ ಚಟುವಟಿಕೆ: ಕಾಶ್ಮೀರ ಸರ್ಕಾರದ ಕಳವಳ
ನವದೆಹಲಿ, ಜ. 6– ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಚಟುವಟಿಕೆಗಳು ಹಠಾತ್ತನೆ ತೀವ್ರಗೊಂಡಿರುವುದರ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರದ ಗಮನವನ್ನು ಸೆಳೆದು, ರಾಜ್ಯದ ಭದ್ರತೆಗೆ ಉಂಟಾಗಿರುವ ಬೆದರಿಕೆಯನ್ನು ಹೇಗೆ ಬಗೆಹರಿಸಬೇಕೆಂದು ಸಲಹೆ ಕೇಳಿದೆ ಎಂದು ಗೊತ್ತಾಗಿದೆ.
ಈ ಶಕ್ತಿಗಳ ದಮನಕ್ಕೆ ಕೈಗೊಳ್ಳಬಹುದಾದ ನಿರ್ದಿಷ್ಟ ಶಾಸನ ಅಥವಾ ಆಡಳಿತ ಕ್ರಮಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ನಡುವೆ ಈಗ ಚರ್ಚೆ ನಡೆಯುತ್ತಿದೆ.
ಲೋಕಸಭೆಗೆ ಮಧ್ಯಂತರ ಚುನಾವಣೆ ನಡೆಯುತ್ತಿರುವುದನ್ನು ಪ್ರತ್ಯೇಕತಾವಾದಿಗಳು ಜನತೆಯ ಭಾವೋದ್ರೇಕವನ್ನು ಕೆರಳಿಸುವುದಕ್ಕೆ ಅವಕಾಶವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗೊತ್ತಾಗಿದೆ.
ಖ್ಯಾತ ಯಕ್ಷಿಣಿಗಾರ ಪಿ.ಸಿ.ಸರ್ಕಾರ್ ನಿಧನ
ಕಲ್ಕತ್ತ, ಜ. 6– ವಿಶ್ವವಿಖ್ಯಾತ ಯಕ್ಷಿಣಿಗಾರ ಪ್ರಫ್ಲುಲ್ಲಚಂದ್ರ ಸರ್ಕಾರ್ ಅವರು ಉತ್ತರ ಜಪಾನಿನ ಆಸಾಹಿಕವ ನಗರದಲ್ಲಿ ಇಂದು ಹೃದ್ರೋಗದಿಂದ ನಿಧನರಾದರು ಎಂದು ಇಲ್ಲಿರುವ ಅವರ ಕುಟುಂಬಕ್ಕೆ ಈ ಸಂಜೆ ಸುದ್ದಿ ಬಂದಿದೆ.