ನವದೆಹಲಿ, ಜೂನ್ 10– ಮೈದಾಹಿಟ್ಟು ಮತ್ತು ದಪ್ಪಬಟ್ಟೆಯ ಮೇಲೆ ಸೂಚಿಸಿದ್ದ ಅಧಿಕ ಕರ ಸಲಹೆಯನ್ನು ಕೇಂದ್ರ ಹಣಕಾಸು ಸಚಿವ ಯಶವಂತರಾವ್, ಬಲವಂತರಾವ್, ಚವಾಣ್ರವರು ಇಂದು ಲೋಕಸಭೆಯಲ್ಲಿ ವಾಪಸು ಪಡೆದರು.
ಸಂಸತ್ತಿನ ಒಕ್ಕೊರಲಿನ ಈ ಬೇಡಿಕೆಗೆ ಮಣಿದು ಸಚಿವರು ಮಾಡಿದ ಪ್ರಕಟಣೆಯನ್ನು ಸಭೆ ಹರ್ಷಧ್ವನಿಗಳಿಂದ ಸ್ವಾಗತಿಸಿತು.
‘ಆದರೆ ಇದನ್ನು ಬಿಟ್ಟು ಇತರ ತೆರಿಗೆ ಸಲಹೆಗಳಲ್ಲಿ ರಿಯಾಯಿತಿ ಕೇಳದಿರಿ’ ಎಂದು ಅವರು ತಮ್ಮ ಪಕ್ಷದವರಿಗೆ (ಆಡಳಿತ ಕಾಂಗ್ರೆಸ್) ಮನವಿ ಮಾಡಿಕೊಂಡರು.
ಆದರೆ ಪೆಟ್ರೋಲ್ ಮೇಲೆ ಸೂಚಿಸಲಾಗಿರುವ ತೆರಿಗೆಯನ್ನು ತೆಗೆದು ಹಾಕಲು ಅಥವಾ ಕಡಿಮೆ ಮಾಡಲು ಚವಾಣ್ ನಿರಾಕರಿಸಿದರು.
ಗ್ರಾಮಗಳ ಶ್ರೀಮಂತರ ಮೇಲೂ ಸಮಾನ ತೆರಿಗೆಗೆ ತತ್ವಶಃ ಒಪ್ಪಿಗೆ
ನವದೆಹಲಿ, ಜೂನ್ 10– ಗ್ರಾಮಗಳಲ್ಲಿರಲಿ, ನಗರಗಳಲ್ಲಿರಲಿ ಶ್ರೀಮಂತರ ಮೇಲೆ ಒಂದೇ ಬಗೆಯಲ್ಲಿ ತೆರಿಗೆ ವಿಧಿಸಬೇಕೆಂಬುದನ್ನು ಹಣಕಾಸು ಸಚಿವ ಚವಾಣರು ಇಂದು ಲೋಕಸಭೆಯಲ್ಲಿ ಒಪ್ಪಿಕೊಂಡರು.
ಸಾಮಾನ್ಯ ಬಜೆಟ್ ಮೇಲೆ ನಡೆದ 20 ಗಂಟೆಗಳ ಚರ್ಚೆಗೆ ಉತ್ತರ ಕೊಟ್ಟ ಸಚಿವರು ಕೃಷಿರಂಗವನ್ನು ಕೇಂದ್ರ ಸರ್ಕಾರದ ಪ್ರತ್ಯಕ್ಷ ತೆರಿಗೆಗಳ ವ್ಯಾಪ್ತಿಯಿಂದ ಹೊರಗಿಡುವ ಸಂವಿಧಾನದ ಆಡಚಣೆಯನ್ನು ವಿವರಿಸಿ ಈ ಸಮಸ್ಯೆ ಕುರಿತು ರಾಜ್ಯ ಸರ್ಕಾರಗಳು ಹೊಸ ದೃಷ್ಟಿಯಿಂದ ನೋಡುವಂತೆ ಅವುಗಳನ್ನು ಒಪ್ಪಿಸಬಹುದೆಂದು ಆಶಿಸಿದರು.