ಒರಿಸ್ಸಾದಲ್ಲಿ ಕೂಡಲೇ ರಾಷ್ಟ್ರಪತಿ ಆಡಳಿತ: ರಾಜ್ಯಪಾಲರ ಶಿಫಾರಸು
ಭುವನೇಶ್ವರ, ಮಾರ್ಚ್ 2– ವಿಧಾನಸಭೆಯನ್ನು ವಿಸರ್ಜಿಸಿ, ತತ್ಕ್ಷಣ ಒರಿಸ್ಸಾದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕೆಂದು ರಾಜ್ಯಪಾಲ ಬಿ.ಡಿ.ಜತ್ತಿ ಅವರು ರಾಷ್ಟ್ರಪತಿ ಗಿರಿ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದ್ದಾರೆಂದು ತಿಳಿದುಬಂದಿದೆ.
ವಿಶೇಷ ಪ್ರತಿನಿಧಿಯೊಬ್ಬರ ಮೂಲಕ ಇಂದು ಸಂಜೆ ರಾಜ್ಯಪಾಲರ ವರದಿಯನ್ನು ವಿಮಾನದಲ್ಲಿ ದೆಹಲಿಗೆ ಕಳುಹಿಸಲಾಯಿತು.
ನಿನ್ನೆ ರಾಜೀನಾಮೆ ನೀಡಿ, ಕಾಂಗ್ರೆಸ್ಸಿನ ಪ್ರಗತಿಪರ ನೀತಿಗಳಿಗೆ ಜನತೆಯಿಂದ ಹೊಸ ಆಶ್ವಾಸನೆ ಪಡೆಯಲು ಹೊಸ ಚುನಾವಣೆಗಳನ್ನು ನಡೆಸಬೇಕೆಂದು ಶಿಫಾರಸು ಮಾಡಿದಾಗ ಮುಖ್ಯಮಂತ್ರಿ ನಂದಿನಿ ಸತ್ಪಥೀ ಅವರಿಗೆ ಶಾಸಕರ ಬಹುಮತ ಬೆಂಬಲ ಇದ್ದಿತೆಂಬ ಅಭಿಪ್ರಾಯವನ್ನು ರಾಜ್ಯಪಾಲರು ತಮ್ಮ ವರದಿಯಲ್ಲಿ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
***
ವಿದೇಶಿ ಆಕ್ರಮಣ ಎದುರಿಸಲು ಭಾರತ ಸಿದ್ಧ: ರಾಂ ಆಶ್ವಾಸನೆ
ನವದೆಹಲಿ, ಮಾರ್ಚ್ 2– ಯಾವುದೇ ವಿದೇಶದಿಂದ ಒದಗುವ ಅಪಾಯವನ್ನು ದೇಶವು ಯಶಸ್ವಿಯಾಗಿ ಎದುರಿಸುವ ಸ್ಥಿತಿಯಲ್ಲಿದೆ ಎಂದು ರಕ್ಷಣಾ ಸಚಿವ ಜಗಜೀವನರಾಂ ಆಶ್ವಾಸನೆ ನೀಡಿದರು.
ಚೀನಾ, ಪಾಕಿಸ್ತಾನ ರಕ್ಷಣಾ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಪ್ರತಿಭಾ ಸಿಂಗ್ ಮತ್ತಿತರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಚೀನಾ, ಪಾಕ್ ನಡುವೆ ಆಗಿದೆಯೆಂದೆನ್ನಲಾದ ಒಪ್ಪಂದ ಮತ್ತು ನಂತರದ ಘಟನೆಗಳನ್ನು ದೇಶದ ರಕ್ಷಣಾ ಸಿದ್ಧತೆ ಹೆಚ್ಚಿಸುವ ಹಿನ್ನೆಲೆ ಯಲ್ಲಿ ಪರಿಗಣಿಸಲಾಗುವುದು ಎಂದರು.