ಬೆಂಗಳೂರು, ಜೂನ್ 5– ರಾಜ್ಯದ ದೇವಾಲಯಗಳಿಗೆ ಸೇರಿದ 4,12,227 ಎಕರೆ ಇನಾಂ ಜಮೀನು ಸದ್ಯದಲ್ಲೇ ಅದರ ಗೇಣಿದಾರರ ಕೈಸೇರಲಿದೆ.
ಈ ಜಮೀನುಗಳ ಆದಾಯವನ್ನು ಕಳೆದುಕೊಳ್ಳುವ ದೇವಾಲಯಗಳಲ್ಲಿ ಎಂದಿ ನಂತೆ ಪೂಜೆ ನಡೆಯಲು ಸರಕಾರ 17.69 ಲಕ್ಷ ರೂಪಾಯಿ ವಾರ್ಷಿಕ ತಸ್ತೀಕನ್ನು ನೀಡಲಿದೆ. ಇಂದು ನಡೆದ ಮಂತ್ರಿ ಮಂಡಲದ ಸಭೆ ದೇವಾಲಯಗಳಿಗೆ ಸೇರಿದ ಇನಾಂಗಳ ಪ್ರಶ್ನೆಯನ್ನು ಇತ್ಯರ್ಥ ಮಾಡಲು ಏಕರೂಪದ ಶಾಸನವನ್ನು ರಚಿಸಲು ತೀರ್ಮಾನಿಸಿತು.
ತಕ್ಷಣ ಜಿಲ್ಲಾಮಟ್ಟದಲ್ಲಿ ಕನ್ನಡ ಆಡಳಿತ ಭಾಷೆ
ಬೆಂಗಳೂರು, ಜೂನ್ 5– ತತ್ಕ್ಷಣದಿಂದ ಜಿಲ್ಲಾಮಟ್ಟದಲ್ಲೂ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತರಲು ಇಂದು ನಡೆದ ಮಂತ್ರಿ ಮಂಡಲದ ಸಭೆ ತೀರ್ಮಾನಿಸಿತು.
ದೇಶೀಯ ವೈದ್ಯಪದ್ಧತಿ ಬೆಳವಣಿಗೆ: ಸರ್ಕಾರದ ಭಾರಿ ಉತ್ತೇಜನ
ಬೆಂಗಳೂರು, ಜೂನ್ 5– ಮಂತ್ರಿ ಮಂಡಲ ಇಂದು ಕೈಗೊಂಡ ನಿರ್ಧಾರದಿಂದಾಗಿ ರಾಜ್ಯ ದಲ್ಲಿ ದೇಶೀಯ ವೈದ್ಯಪದ್ಧತಿಯ ಬೆಳವಣಿಗೆ ಹಾಗೂ ಸಂಶೋಧನೆಗೆ ಭಾರಿ ಉತ್ತೇಜನ ದೊರೆಯಲಿದೆ.
‘ಇಷ್ಟುಕಾಲ ಈ ವೈದ್ಯಪದ್ಧತಿಗೆ ನಿರಾಕರಿಸಲ್ಪಟ್ಟಿದ್ದ ಪ್ರಾಮುಖ್ಯ ಈಗ ಅದಕ್ಕೆ ಬಂದಿದೆ. ಆಯುರ್ವೇದ ಹಾಗೂ ಇತರ ದೇಶೀಯ ವೈದ್ಯ ಪದ್ಧತಿ ಇತರ ವೈದ್ಯಪದ್ಧತಿಗಿಂತ ಕಡಿಮೆ ಪರಿಣಾಮಕಾರಿಯಾದುದಲ್ಲ. ಕೆಲವು ವಿಷಯಗಳಲ್ಲಿ ‘ಹೆಚ್ಚು ಪರಿಣಾಮಕಾರಿ’ ಎಂದು ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ವರದಿಗಾರರಿಗೆ ತಿಳಿಸಿದರು.