ನವದೆಹಲಿ, ಡಿ. 4– ರಾಷ್ಟ್ರದ ಕೆಲವು ಕಡೆ ಐದು ಮತ್ತು ಎರಡು ಪೈಸೆ ನಾಣ್ಯಗಳ ಅಭಾವಕ್ಕೆ ಲಾಭಕೋರರ ದುರುಪಯೋಗವೇ ಕಾರಣ ಎಂದು ಅರ್ಥ ಶಾಖೆ ಸ್ಟೇಟ್ ಸಚಿವ ವಿ.ಸಿ. ಶುಕ್ಲ ಅವರು ಇಂದು ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದರು.
ನಿಕ್ಕಲ್ ಮತ್ತು ತಾಮ್ರದ ನಾಣ್ಯಗಳ ಲೋಹದ ಬೆಲೆಯು ಅವುಗಳ ಮುಖಮೌಲ್ಯಕ್ಕಿಂತಲೂ ಅಧಿಕವಾಗಿರುವುದರಿಂದ, ಲಾಭಕೋರರು ಈ ನಾಣ್ಯಗಳನ್ನೆಲ್ಲಾ ಕರಗಿಸಿ ಲೋಹವನ್ನು ಬೇರೆ ಉದ್ದೇಶಗಳಿಗಾಗಿ ದುರುಪಯೋಗ ಪಡಿಸುತ್ತಿದ್ದಾರೆಂದು ಅವರು ವಿವರಣೆ ನೀಡಿದರು.
ರಾಷ್ಟ್ರದಲ್ಲಿ ಚಿಕ್ಕ ನಾಣ್ಯಗಳ ಅಭಾವ ತಲೆದೋರಿ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಿರುವುದೆಂಬ ಗಮನ ಸೆಳೆಯುವ ಸೂಚನೆಗೆ ಸಚಿವರು ಉತ್ತರ ನೀಡಿದರು.
ರಷ್ಯಾ ಭೂಪಟಗಳ ಬಗ್ಗೆ ಲೋಕಸಭೆಯಲ್ಲಿ ಮತ್ತೆ ತೀವ್ರ ಆತಂಕ
ನವದೆಹಲಿ, ಡಿ. 4– ಭಾರತ– ಚೀನಾ ಗಡಿಯನ್ನು ಸರಿಯಾಗಿ ತೋರಿಸದ ಸೋವಿಯತ್ ಭೂಪಟಗಳ ಬಗ್ಗೆ ಲೋಕಸಭೆ ಇಂದು ಮತ್ತೆ ತನ್ನ ತೀವ್ರ ಆತಂಕವನ್ನು ವ್ಯಕ್ತಪಡಿಸಿತು.
ಕಳೆದ 15 ವರ್ಷಗಳಿಂದ ಸೋವಿಯತ್ ಯೂನಿಯನ್ ನಡೆಸುತ್ತಿರುವ ಈ ‘ಭೂಪಟಾಕ್ರಮಣ’ವನ್ನು ತೆರವು ಮಾಡಿಸಲು ಸರ್ಕಾರ ಅಸಮರ್ಥವಾಗಿದೆ ಎಂದೂ ಸದಸ್ಯರು ಆಪಾದಿಸಿದರು.