ರೂಪಾಯಿ ಮೌಲ್ಯಚ್ಛೇದನ, ಹೊಸ ನೋಟು ಚಲಾವಣೆ ‘ಸುಳ್ಳು ಸುದ್ದಿ’ ಎಂದು ಚವಾಣ್
ನವದೆಹಲಿ, ನ. 20– ರೂಪಾಯಿಯ ಮೌಲ್ಯಚ್ಛೇದನ ಅಥವಾ ಹೊಸ ನೋಟುಗಳನ್ನು ಚಲಾವಣೆಗೆ ತರುವ ವಿಚಾರವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂಬುದು ‘ಸುಳ್ಳು ಸುದ್ದಿ’ ಎಂದು ಕೇಂದ್ರ ಹಣಕಾಸು ಸಚಿವ ವೈ.ಬಿ.ಚವಾಣ್ ಇಂದು ಲೋಕಸಭೆಗೆ ತಿಳಿಸಿದರು.
ವಿದೇಶಿ ವಿನಿಮಯ ಹತೋಟಿ ಕ್ರಮಗಳನ್ನು ಕೈಗೊಂಡಾಗಿನಿಂದ ವಿದೇಶಿ ವಿನಿಮಯಕ್ಕಾಗಿ ಕಾಳಸಂತೆ ವ್ಯವಹಾರದಲ್ಲಿ ತೊಡಗುವ ಪ್ರವೃತ್ತಿ ಹೆಚ್ಚಿದೆ. ಅಕ್ರಮ ವ್ಯವಹಾರಗಳಿಗೆ ಸರ್ಕಾರದ ಮಾನ್ಯತೆ ಇಲ್ಲ.
ಅನೇಕ ಬಗೆಯ ಕಾರಣಗಳಿಗಾಗಿ ಜನರು ಈ ಕಾಳಸಂತೆ ವ್ಯವಹಾರದಲ್ಲಿ ನಿರತರಾಗುವುದರಿಂದ, ದರಗಳ ಏರಿಳಿತಕ್ಕೆ ಯಾವುದೊಂದು ಅಂಶವೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ ಎಂದೂ ಸಚಿವರು ನುಡಿದರು.
ಕೃಷಿ ಆಯೋಗದ ಅಧ್ಯಕ್ಷ, ಸದಸ್ಯರ ನೇಮಕದಲ್ಲಿ ರಾಜಕೀಯ: ಟೀಕೆ
ನವದೆಹಲಿ, ನ. 20– ರಾಷ್ಟ್ರೀಯ ಕೃಷಿ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಾಗಿ ನಾಲ್ವರು ಸಂಸತ್ ಸದಸ್ಯರ ನೇಮಕದಲ್ಲಿ ‘ರಾಜಕೀಯ ಉದ್ದೇಶಗಳ’ ಪ್ರಭಾವಕ್ಕೆ ಸರ್ಕಾರ ಒಳಗಾಗಿದೆಯೆಂದು ಇಂದು ರಾಜ್ಯಸಭೆಯಲ್ಲಿ ಕಮ್ಯುನಿಸ್ಟ್ ಪಕ್ಷವನ್ನುಳಿದು ಇತರ ವಿರೋಧ ಪಕ್ಷಗಳ ಸದಸ್ಯರು ಆಪಾದಿಸಿದರು.