ಬಳ್ಳಾರಿ, ಜ. 22– ಯಾವುದೇ ಕಾರಣಕ್ಕೂ ಪ್ರಸಕ್ತ ವಿಧಾನಸಭೆಯನ್ನು ವಿಸರ್ಜಿಸಲು ತಾವು ಶಿಫಾರಸು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಇಲ್ಲಿ ಸ್ಪಷ್ಟಪಡಿಸಿದರು.
ಜಿಲ್ಲಾ ಜನತಾದಳ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
‘ಯಾರೋ ಒಬ್ಬರು ಹೇಳಿದರು ಎಂದ ಮಾತ್ರಕ್ಕೆ, ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ಚುನಾವಣೆ ನಡೆಸುವುದಕ್ಕೆ ಪೋಲು ಮಾಡಲು ನಾನು ಇಚ್ಛಿಸುವುದಿಲ್ಲ’ ಎಂದು ಅವರು ನುಡಿದರು.
‘ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ಅವರ ಸ್ವಾರ್ಥ ಮನೋಭಾವ, ದುಡುಕಿ ನಿಂದ ಕೇವಲ 18 ತಿಂಗಳಲ್ಲಿ ಮತ್ತೆ ಲೋಕ ಸಭೆಗೆ ಮಧ್ಯಂತರ ಚುನಾವಣೆ ಎದುರಿಸುವ ಪರಿಸ್ಥಿತಿ ಒದಗಿದೆ. ಇದು ಯಾವುದೇ ಪಕ್ಷಕ್ಕೆ ಶೋಭೆ ತರುವ ಕೆಲಸವಲ್ಲ’ ಎಂದರು.
ಜಲಂಧರ್ನಲ್ಲಿ ಗುಜ್ರಾಲ್ ನಾಮಪತ್ರ
ಜಲಂಧರ್, ಜ. 22 (ಪಿಟಿಐ)– ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಜಲಂಧರ್ ಲೋಕಸಭಾ ಕ್ಷೇತ್ರದಲ್ಲಿ ಜನತಾದಳದ ಅಭ್ಯರ್ಥಿಯಾಗಿ ಇಂದು ತಮ್ಮ ನಾಮಪತ್ರ ಸಲ್ಲಿಸಿದರು.
ಪ್ರಧಾನಿ ಗುಜ್ರಾಲ್ ಅವರು ಸಹಿ ಮಾಡಿದ ನಾಮಪತ್ರಗಳನ್ನು ಕೇಂದ್ರ ಸಚಿವ ಬಲವಂತ್ ಸಿಂಗ್ ರಾಮೂ ವಾಲಿಯ ಅವರು ಚುನಾವಣಾಧಿಕಾರಿ ಎಂ.ಪಿ. ಸಿಂಗ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅಕಾಲಿದಳ ಮುಖ್ಯಸ್ಥ ಹಾಗೂ ಪಂಜಾಬ್ನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮಧು ದಂಡವತೆ ಮತ್ತಿತರರು ಹಾಜರಿದ್ದರು.