ನವದೆಹಲಿ, ಜ. 27 (ಪಿಟಿಐ)– ಸಾಧ್ವಿ ರಿತಾಂಬರಾ ಮತ್ತು ಸ್ವಾಮಿ ಪರಮಾನಂದಜಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ದೆಹಲಿ ಹೈಕೋರ್ಟ್ ಇಂದು ಇಬ್ಬರನ್ನೂ 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿತು.
‘ಕೋಮು ಭಾವನೆಗಳನ್ನು ಕೆರಳಿಸುವ ಭಾಷಣಗಳನ್ನು ಇಬ್ಬರೂ ಮಾಡಿದ್ದು ಅವರಿಗೆ ಜಾಮೀನು ನೀಡುವುದು ಸಾಧ್ಯವಿಲ್ಲ’ ಎಂದು ನ್ಯಾಯಾಧೀಶ ಎಸ್.ಕೆ.ಅಗರ್ವಾಲ್ ತಮ್ಮ ತೀರ್ಪಿನಲ್ಲಿ ಸ್ಪಷ್ಟಪಡಿಸಿದರು.
1990ರಲ್ಲಿ ಅಯೋಧ್ಯೆಯಲ್ಲಿ ದೇವಾಲಯ ಕಟ್ಟುವುದರ ಕುರಿತು ಪೂರ್ವ ದೆಹಲಿಯ ಕೃಷ್ಣಾನಗರದಲ್ಲಿ ಈ ಇಬ್ಬರೂ ಕೋಮು ವೈಷಮ್ಯ ಕೆರಳಿಸುವ ಭಾಷಣ ಮಾಡಿದ್ದಾರೆಂದು ದೆಹಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.
‘ಪೃಥ್ವಿ’ ಕ್ಷಿಪಣಿ ಪರೀಕ್ಷೆ ಯಶಸ್ವಿ
ನವದೆಹಲಿ, ಜ. 27 (ಪಿಟಿಐ, ಯುಎನ್ಐ)– ಸಂಪೂರ್ಣ ಸ್ವದೇಶಿ ನಿರ್ಮಿತ, 250 ಕಿ.ಮೀ ದೂರ ವ್ಯಾಪ್ತಿಯ ‘ಪೃಥ್ವಿ–2’ ಕ್ಷಿಪಣಿ ಪರೀಕ್ಷಾ ಪ್ರಯೋಗ ಇಂದು ಮಧ್ಯಾಹ್ನ 2.25ಕ್ಕೆ ಒರಿಸ್ಸಾ ಕರಾವಳಿಯ ಚಂಡೀಪುರ ಕೇಂದ್ರದಿಂದ ಯಶಸ್ವಿಯಾಗಿ ನಡೆಯಿತು.
ನಿನ್ನೆ ಇಲ್ಲಿ ಗಣರಾಜ್ಯೋತ್ಸವ ಪರೇಡ್ನಲ್ಲಿ ದೇಶಿ ನಿರ್ಮಿತ ‘ಅರ್ಜುನ್’ ಯುದ್ಧ ಟ್ಯಾಂಕ್ ಜೊತೆ ಪ್ರದರ್ಶಿತವಾಗಿದ್ದ ‘ಪೃಥ್ವಿ–2’ ಕೇವಲ 24 ಗಂಟೆಗಳಲ್ಲಿಯೇ ಯಶಸ್ವಿಯಾಗಿ ತನ್ನ ಪರೀಕ್ಷಾ ಪ್ರಯೋಗ ಪೂರ್ಣಗೊಳಿಸಿದ್ದು, ಭಾರತದ ರಾಷ್ಟ್ರೀಯ ಸಮಗ್ರ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ (ಐಜಿಎಂಡಿಪಿ) ಮಹತ್ವದ ಮೈಲಿಗಲ್ಲು.