ರಾಷ್ಟ್ರಪತಿ ಅವರಿಂದ ರಾಷ್ಟ್ರದಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ
ನವದೆಹಲಿ, ಡಿ. 3– ರಾಷ್ಟ್ರಪತಿ ವಿ.ವಿ. ಗಿರಿ ಅವರು ಇಂದು ರಾತ್ರಿ ರಾಷ್ಟ್ರದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದರು.
ಪಾಕಿಸ್ತಾನದ ವಿಮಾನಗಳು ಇಂದು ಸಂಜೆ ಪಶ್ಚಿಮ ವಲಯದಲ್ಲಿ ಶ್ರೀನಗರದಿಂದ ಆಗ್ರಾವರೆಗೆ ಅನೇಕ ಭಾರತೀಯ ವಿಮಾನ ನಿಲ್ದಾಣಗಳ ಮೇಲೆ ಹಠಾತ್ ದಾಳಿ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಯಿತು.
ಭೂ, ವಾಯು ಮತ್ತು ನೌಕಾ ಪಡೆಗಳ ಮಹಾದಂಡನಾಯಕರೂ ಹಾಜರಿದ್ದ ಸಂಪುಟದ ರಾಜಕೀಯ ವ್ಯವಹಾರ ಸಮಿತಿ ಸಭೆ ಮುಗಿದ ಕೂಡಲೇ ತುರ್ತು ಪರಿಸ್ಥಿತಿ ಪ್ರಕಟಿಸಲಾಯಿತು.
ಸಂಪುಟ ಸಭೆ ಮುಗಿದ ಬಳಿಕ ಸಂಸತ್ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ ಪ್ರಧಾನ ಮಂತ್ರಿಗಳು ಸರ್ಕಾರ ಕೈಗೊಂಡ ತುರ್ತು ನಿರ್ಧಾರಗಳ ಬಗ್ಗೆ ವಿವರಣೆ ನೀಡಿದರು.
ಮೂರು ಪಾಕ್ ವಿಮಾನಗಳ ಧ್ವಂಸ
ನವದೆಹಲಿ, ಡಿ. 3– ಪಾಕಿಸ್ತಾನದ ಮೂರು ಯುದ್ಧ ವಿಮಾನಗಳನ್ನು ಇಂದು ಗುಂಡಿಕ್ಕಿ ಕೆಡವಲಾಯಿತು.
ಈ ಪೈಕಿ ಎರಡನ್ನು ಹಲ್ವಾರಾ ಮತ್ತು ಅಮೃತಸರದ ಬಳಿಯೂ ಮತ್ತೊಂದನ್ನು ಆಗ್ರಾ ನಗರದಿಂದ 17 ಕಿ.ಮೀ ದೂರದಲ್ಲಿರುವ ಕೀತಾನ್ ಎಂಬಲ್ಲಿಯೂ ಧ್ವಂಸ ಮಾಡಿದ್ದನ್ನು ಇಂದು ಮಧ್ಯರಾತ್ರಿ ನಂತರ ಅಧಿಕೃತವಾಗಿ ಪ್ರಕಟಿಸಲಾಯಿತು.