ಬೆಂಗಳೂರು, ನ. 29– ಇಂದು ಮಧ್ಯಾಹ್ನ ಆಡಳಿತ ಕಾಂಗ್ರೆಸ್ಸಿನ ಯುವ ಕಾಂಗ್ರೆಸ್ಸಿಗರು ಅನಿರೀಕ್ಷಿತವಾಗಿ ವಶಕ್ಕೆ ತೆಗೆದುಕೊಂಡ ಸಂಸ್ಥಾ ಕಾಂಗ್ರೆಸ್ ಭವನಕ್ಕೆ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟರ ಆಜ್ಞೆಯಂತೆ ರಾತ್ರಿ ಪೊಲೀಸರು ಬೀಗ ಮುದ್ರೆ ಹಾಕಿದರು.
ವಿದೇಶ ಪ್ರವಾಸದಿಂದ ಹಿಂದಿರುಗಿದ ಆಡಳಿತ ಕಾಂಗ್ರೆಸ್ಸಿನ ಪ್ರದೇಶ ಸಮಿತಿ ಅಧ್ಯಕ್ಷ ಶ್ರೀ ದೇವರಾಜ ಅರಸು ಅವರು ವಿಮಾನದಿಂದ ಇಳಿಯುತ್ತಿದ್ದಂತೆ ಇತ್ತ ಯುವ ಕಾಂಗ್ರೆಸ್ಸಿಗರು ಆಡಳಿತ ಕಾಂಗ್ರೆಸ್ ಕಚೆರಿಯಿಂದ ಹೊರಟು ರೇಸ್ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನಕ್ಕೆ ತೆರಳಿ ಬಲವಂತದಿಂದ ಕಚೇರಿಯನ್ನು ಪ್ರವೇಶಿಸಿದರು.
ನಿನ್ನೆ ರಾತ್ರಿ ಸಂಸ್ಥಾ ಕಾಂಗ್ರೆಸ್ ಭವನವನ್ನು ವಶಕ್ಕೆ ತೆಗೆದುಕೊಳ್ಳುವ ತೀರ್ಮಾನ ಕೈಗೊಂಡ ಯುವ ಕಾಂಗ್ರೆಸ್ಸಿಗರು ಮಧ್ಯಾಹ್ನದವರೆಗೂ ಗುಟ್ಟಿನಲ್ಲಿಟ್ಟಿದ್ದರು. ಈ ಹಠಾತ್ ಘಟನೆ ಸಂಸ್ಥಾ ಕಾಂಗ್ರೆಸ್ಸಿಗರನ್ನು ಚಕಿತಗೊಳಿಸಿತು.
ಕೇಂದ್ರ ನೌಕರರಿಗೆ 8ರಿಂದ 20 ರೂ. ಹೆಚ್ಚಿನ ತುಟ್ಟಿಭತ್ಯೆ
ನವದೆಹಲಿ, ನ. 29–ಕೇಂದ್ರ ಸರ್ಕಾರದ ನೌಕರರಿಗೆ ಈ ವರ್ಷದ ಸೆಪ್ಟೆಂಬರ್ ಒಂದರಿಂದ ತಿಂಗಳೊಂದಕ್ಕೆ ರೂ. 8ರಿಂದ ರೂ. 20 ರವರೆಗೆ ಹೆಚ್ಚಿನ ತಾತ್ಕಾಲಿಕ ಪರಿಹಾರ ನೀಡುವಂತೆ ತೃತೀಯ ವೇತನ ಆಯೋಗ ಶಿಫಾರಸು ಮಾಡಿದೆಯೆಂದು ತಿಳಿದು ಬಂದಿದೆ.