ಧನ್ಬಾದ್, ಮಾರ್ಚ್ 19– ಇಲ್ಲಿಗೆ ಸುಮಾರು ಹದಿನಾರು ಕಿಲೋಮೀಟರು ದೂರದಲ್ಲಿ ಭಾರತೀಯ ಕಬ್ಬಿಣ ಮತ್ತು ಉಕ್ಕು ಸಂಸ್ಥೆಯ ಜಿತ್ಪುರ ಕಲ್ಲಿದ್ದಲು ಗಣಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ 47 ಮಂದಿ ಸತ್ತು ಇನ್ನೂ ಅನೇಕರಿಗೆ ಗಾಯಗಳಾಗಿವೆಯೆಂದು ಶಂಕಿಸಲಾಗಿದೆ.
ಸ್ಫೋಟ ಸಂಭವಿಸಿದ ಕಾಲದಲ್ಲಿ ಆ ಗಣಿಯಲ್ಲಿ ಒಟ್ಟು 100 ಮಂದಿ ಇದ್ದರೆಂದು ಗಣಿಸುರಕ್ಷಿತ ಡೆಪ್ಯೂಟಿ ಡೈರೆಕ್ಟರ್–ಜನರಲ್ ಶ್ರೀ ಎಸ್.ಎಸ್.ಪ್ರಸಾದ್ ತಿಳಿಸಿದ್ದಾರೆ.
ದುರಂತದಲ್ಲಿ ಸತ್ತವರ 36 ದೇಹಗಳನ್ನು ಮೇಲಕ್ಕೆ ತರಲಾಗಿದೆ. ಅಲ್ಲದೆ ಇನ್ನು ಆರು ಮಂದಿಯ ದೇಹಗಳನ್ನು ಪತ್ತೆಹಚ್ಚಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಏಳು ಜನರು ಕಾಣೆಯಾಗಿದ್ದಾರೆ. ಅಪಘಾತ ಸಂಭವಿಸಿದಾಗ ಗಣಿಯಲ್ಲಿ 102 ಜನ ಕೆಲಸಗಾರರಿದ್ದು, ಅವರಲ್ಲಿ 43 ಜನರನ್ನು ಅಪಾಯತಟ್ಟದಂತೆ ರಕ್ಷಿಸಲಾಯಿತು.
ಹುಬ್ಬಳ್ಳಿ–ಕಾರವಾರ ರೈಲ್ವೆ ಬಗೆಗೆ ಶೀಘ್ರವೆ ಸಮೀಕ್ಷೆ ವರದಿ ಸಿದ್ಧ
ಬೆಂಗಳೂರು, ಮಾರ್ಚ್ 19– ಹುಬ್ಬಳ್ಳಿ– ಕಾರವಾರ ರೈಲುಮಾರ್ಗ ನಿರ್ಮಾಣದ ಬಗೆಗೆ ಸಮೀಕ್ಷೆ ನಡೆಯುತ್ತಿದ್ದು, ವರದಿ ಸದ್ಯದಲ್ಲೇ ಸಿದ್ಧವಾಗಲಿದೆ ಎಂದು ಲೋಕೋಪಯೋಗಿ ಖಾತೆಯ ಸಚಿವ ಶ್ರೀ ಎಚ್.ಎಂ.ಚನ್ನಬಸಪ್ಪ ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.
ಶ್ರೀ ವೈ.ಎಸ್.ಪಾಟೀಲ್ (ಜ.ಸಂ) ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸಂಬಂಧದಲ್ಲಿ ರಾಜ್ಯ ಸರ್ಕಾರ ಕೇಂದ್ರದೊಡನೆ ವ್ಯವಹರಿಸುತ್ತಿದೆ ಎಂದರು.