ಬೆಂಗಳೂರು, ಜೂನ್ 23– ‘ಒಬ್ಬೊಬ್ಬ ಎಂ.ಎಲ್.ಎ.ಗೆ ಒಂದೊಂದು ಚೆಕ್ಪೋಸ್ಟ್ ಕೊಟ್ಟುಬಿಡಿ. 5 ವರ್ಷ ನಾವು ಸ್ವಲ್ಪ ಸ್ವಲ್ಪ ಮಾಡ್ಕೊತೀವಿ’.
ಚೆಕ್ಪೋಸ್ಟ್ಗಳಲ್ಲಿ ಲಂಚ ಹಾಗೂ ಸೋರುವಿಕೆಯತ್ತ ಗಮನ ಸೆಳೆಯಲು ಈ ರೀತಿ ವರ್ಗಿಸಿದವರು ಕಾಂಗ್ರೆಸ್ ಸದಸ್ಯ ಶ್ರೀ ಗಟ್ಟಿ ಚಂದ್ರಶೇಖರ್ ಅವರು.
ಸರಳಗನ್ನಡದಲ್ಲಿ ತಿಳಿಹಾಸ್ಯದೊಡನೆ ನೇರ ಹಾಗೂ ನಾಟುವ ಶೈಲಿಯಲ್ಲಿ ಮಾತನಾಡುವ, ಸಭೆಯ ನೂತನ ಸದಸ್ಯರಿವರು.
ಶುಕ್ರವಾರ ವಿಧಾನಸಭೆಯಲ್ಲಿ ಬಜೆಟ್ ಮೇಲೆ ಚರ್ಚೆ ಮುಂದುವರಿಯಿತು. ವಿಧಾನಪರಿಷತ್ತಿನಲ್ಲಿ ಆರಂಭವಾಯಿತು.
ಶ್ರೀ ಗಟ್ಟಿ ಚಂದ್ರಶೇಖರ್ ಅವರು ಮಾರಾಟ ತೆರಿಗೆಯನ್ನು ‘ಪುಂಡರ ಕಂದಾಯ’ ಎಂದು ಕರೆದರು.
ಒಬ್ಬ ಸಿ.ಟಿ.ಓ. ಬೆಂಗಳೂರಿನಲ್ಲಿ 3 ಮನೆ 3 ಕಾರು ಇಟ್ಟುಕೊಂಡಿದ್ದಾರಂತೆ. ಒಬ್ಬರು ಡೆಪ್ಯುಟಿ ಸಿ.ಟಿ.ಓ. ಬೆಂಗಳೂರಿನಲ್ಲಿ 4 ಮನೆ, 6 ಕಾರು ಇಟ್ಟುಕೊಂಡಿದ್ದಾರಂತೆ. ಇವರಲ್ಲಿ ಒಬ್ಬರನ್ನು ‘ಗ್ರ್ಯಾಜುಯೇಟ್’ ಮತ್ತೊಬ್ಬರನ್ನು ‘ಪೋಸ್ಟ್ ಗ್ರ್ಯಾಜುಯೇಟ್’ ಎಂದು ಕರೆದರು.