ಬೆಂಗಳೂರು, ನವೆಂಬರ್ 28– ಘೋಷಣೆ, ದೂಷಣೆಗಳ ಗೊಂದಲದ ನಡುವೆ ವಿರೋಧ ಪಕ್ಷದ ಸದಸ್ಯರು ಯಶಸ್ವಿಯಾಗಿ ನಡೆಸಿದ ಧರಣಿ ಸತ್ಯಾಗ್ರಹವನ್ನನುಸರಿಸಿ, ಅಭಾವ ಪೀಡಿತ ಜಿಲ್ಲೆಗಳ ಖುದ್ದು ಅಧ್ಯಯನಕ್ಕಾಗಿ ಶಾಸಕರ ತಂಡವೊಂದನ್ನು ರಚಿಸಿ ಕಳುಹಿಸಲು, ಸರ್ಕಾರ ಇಂದು ವಿಧಾನಸಭೆಯಲ್ಲಿ ಒಪ್ಪಿಕೊಂಡಿತು.
ಕಲ್ಬುರ್ಗಿ, ಬೀದರ, ಬಿಜಾಪುರ, ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನಾಲ್ಕೈದು ದಿನಗಳ ಕಾಲ ಪ್ರವಾಸ ಮಾಡಿ, ಒಂದು ವಾರದಲ್ಲಿ ಚರ್ಚೆಗೆ ವರದಿ ಸಲ್ಲಿಸಲಿರುವ ಹತ್ತು ಮಂದಿ ಸದಸ್ಯರ ಸಮಿತಿಯನ್ನು ವಿರೋಧ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ, ನಾಳೆ ಮುಖ್ಯಮಂತ್ರಿ ದೇವರಾಜ ಅರಸು ಅವರು ಪ್ರಕಟಿಸಲಿದ್ದಾರೆ.
ಭಾರತ–ಪಾಕಿಸ್ತಾನ್ ಮುಖ್ಯ ದಂಡನಾಯಕರ ಮಾತುಕತೆ ವಿಫಲ
ನವದೆಹಲಿ, ನವೆಂಬರ್ 28– ಶಿಮ್ಲಾ ಒಪ್ಪಂದದ ಜಾರಿಗೆ ತಡೆಯುಂಟು ಮಾಡಿರುವ ಠಾಕೂರ್ ಚೌಕ್ ಪ್ರಶ್ನೆಯನ್ನು ಬಗೆಹರಿಸಲು ಭಾರತ ಮತ್ತು ಪಾಕಿಸ್ತಾನದ ಪ್ರಧಾನ ದಂಡನಾಯಕರು ಇಂದು ವಿಫಲರಾಗಿ ಪ್ರಶ್ನೆಯನ್ನು ತಂತಮ್ಮ ಸರ್ಕಾರಗಳಿಗೆ ಮತ್ತೆ ಪರಿಶೀಲನೆಗೆ ಒಪ್ಪಿಸಲು ನಿರ್ಧರಿಸಿದರು.
ಲಾಹೋರಿನಲ್ಲಿ ನಡೆದ ಈ ಮಾತುಕತೆಗಳಿಗೆ ಹೋಗಿದ್ದ ಭಾರತದ ಪ್ರಧಾನ ದಂಡನಾಯಕ ಜನರಲ್ ಮಾಣೆಕ್ ಷಾ ಅವರು ಪಾಕಿಸ್ತಾನದ ಪ್ರಧಾನ ದಂಡನಾಯಕ ಜನರಲ್ ಟಿಕ್ಕಾಖಾನ್ರ ಜತೆ ಚರ್ಚೆ ನಡೆಸಿದ ನಂತರ ಸಂಜೆ ಆರಕ್ಕೆ ಮುಂಚೆಯೇ ದೆಹಲಿಗೆ ವಾಪಸ್ ಆದರು.