ಠಾಕೂರ್ ಚೌಕ ಪ್ರದೇಶ ಪಾಕ್ ಪಂಜಾಬಿನ ಭಾಗ ವಿವಾದಕ್ಕೆ ಹೊಸ ತಿರುವು
ರಾವಲ್ಪಿಂಡಿ, ನ. 29– ಕಾಶ್ಮೀರದಲ್ಲಿ ಹತೋಟಿ ರೇಖೆ ಗುರುತಿಸುವುದಕ್ಕೆ ಏಕೈಕ ಅಡ್ಡಿಯಾಗಿರುವ ಠಾಕೂರ್ ಚೌಕ ಪ್ರದೇಶವು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಾಗವೆಂಬ ವಾದವನ್ನು ಪಾಕಿಸ್ತಾನ ಈಗ ಮಂಡಿಸುತ್ತಿರುವಂತೆ ಕಂಡು ಬರುತ್ತಿದ್ದು ಇದರಿಂದ ವಿವಾದಕ್ಕೆ ಹೊಸ ತಿರುವು ಉಂಟಾಗಿದೆ.
ಠಾಕೂರ್ ಚೌಕ ಪ್ರದೇಶದಿಂದ ಪಾಕಿಸ್ತಾನಿ ಸೈನಿಕರು ವಾಪಸಾಬೇಕೆಂಬುದು ಭಾರತದ ಸ್ಪಷ್ಟ ನಿಲುವಾಗಿದೆ.
ಹತೋಟಿ ರೇಖೆ ಗುರುತಿಸುವ ಸಂಬಂಧ ದಲ್ಲಿ ಉಂಟಾಗಿರುವ ವಿವಾದವನ್ನು ತಮ್ಮ ತಮ್ಮ ಸರ್ಕಾರಗಳ ಪರಿಶೀಲನೆಗೇ ಒಪ್ಪಿಸಲು ಭಾರತ ಹಾಗೂ ಪಾಕಿಸ್ತಾನ ದಂಡನಾಯಕರು ನಿರ್ಧರಿಸಿದ್ದು, ಸಿಮ್ಲಾ ಒಪ್ಪಂದ ಜಾರಿಗೆ ಬರುವುದು ಇನ್ನಷ್ಟು ನಿಧಾನವಾಗುವುದಕ್ಕೆ ಕಾರಣವಾಗಬಹುದೆಂದು ಇಲ್ಲಿನ ಅಧಿಕೃತ ವಲಯಗಳು ಭಾವಿಸಿವೆ.
ವಿದ್ಯಾರ್ಥಿ ಚಳವಳಿಕಾರರ ಮೇಲೆ ಲಾಠಿ: 27 ಮಂದಿಗೆ ಗಾಯ
ಹುಬ್ಬಳ್ಳಿ, ನ. 29– ವಿದ್ಯಾರ್ಥಿಗಳ ಚಳವಳಿಯ 3ನೇ ದಿನವಾದ ಇಂದು, ಇಲ್ಲಿನ ಜೆ.ಜಿ. ಕಾಮರ್ಸ್ ಕಾಲೇಜಿಗೆ ಸಮೀಪದ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಅಡ್ಡಗಟ್ಟಿದ ವಿದ್ಯಾರ್ಥಿ ಚಳವಳಿಕಾರರ ಮೇಲೆ ಪೊಲೀಸರು ಎರಡು ಬಾರಿ ಲಾಠಿ ಪ್ರಹಾರ ಮಾಡಿದರು.
ಲಾಠಿ ಪ್ರಹಾರದಿಂದ 20 ಮಂದಿ ವಿದ್ಯಾರ್ಥಿಗಳು ಮತ್ತು ಕಲ್ಲೆಸೆತದಿಂದ ಇಬ್ಬರು ಅಧಿಕಾರಿಗಳ ಸಹಿತ ಒಟ್ಟು 27 ಪೊಲೀಸರು ಗಾಯಗೊಂಡರು.
ಖಾಸಗಿ ಕಾಲೇಜುಗಳಲ್ಲಿ ಶಿಕ್ಷಣ ಶುಲ್ಕ ಇಳಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಚಳವಳಿ ನಡೆಸುತ್ತಿದ್ದಾರೆ.