ಖಾಸಗಿ ಶಾಲಾ ಶಿಕ್ಷಕರ ಹಂಗಾಮಿ ವಜಾ ವಿರುದ್ಧ ಕ್ರಮ: ಅರಸು ಭರವಸೆ
ಬೆಂಗಳೂರು, ಮಾ. 30– ಖಾಸಗಿ ಶಾಲಾ ಆಡಳಿತ ವರ್ಗದವರು ಉಪಾಧ್ಯಾಯರನ್ನು ಅಕ್ರಮವಾಗಿ ಹೊರದೂಡುವುದಕ್ಕೆ ಸರ್ಕಾರ ಅವಕಾಶ ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರು ಇಂದು ವಿಧಾನ ಪರಿಷತ್ತಿನಲ್ಲಿ ಭರವಸೆ ನೀಡಿದರು.
ಶ್ರೀ ಮಳೂರು ಆನಂದರಾವ್ ಅವರು ಅನೇಕ ಆಡಳಿತ ವರ್ಗದವರು ಏಪ್ರಿಲ್ 10 ರಂದು ಅನೇಕರನ್ನು ಕೆಲಸದಿಂದ ತೆಗೆಯುವ ಭಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದಾಗ ಮುಖ್ಯಮಂತ್ರಿಗಳು ತಮ್ಮ ಗಮನಕ್ಕೂ ಅನೇಕ ವಿಚಾರಗಳು ಬಂದಿವೆಯೆಂದು ಹೇಳಿ ‘ಅನಗತ್ಯವಾಗಿ ಹೊರದೂಡುವುದು ಮಾತ್ರವಲ್ಲ ಅನೇಕ ಶಿಕ್ಷಕರ ಹೆಸರನ್ನು ರಿಜಿಸ್ಟರ್ನಲ್ಲೂ ಬರೆದಿಲ್ಲ’ ಎಂದರು.
ನಿಯಮದ ಪ್ರಕಾರ ಯಾರನ್ನಾದರೂ ಕೆಲಸದಿಂದ ತೆಗೆಯಬೇಕಾದರೆ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಅನುಮತಿ ಪಡೆಯಬೇಕೆಂದೂ ಆಡಳಿತ ವರ್ಗ ಯಾರನ್ನಾದರೂ ಮುಂದುವರೆಸುವುದು ಕಷ್ಟವಾದರೆ ಸರ್ಕಾರದ ಗಮನಕ್ಕೆ ಅದನ್ನು ತರಬೇಕೆಂದೂ ವಿವರಿಸಿದರು.
ಮರಣದಂಡನೆ ರದ್ದಿಗೆ ರಾಜ್ಯಗಳ ವಿರೋಧ
ನವದೆಹಲಿ, ಮಾ. 30– ಮರಣದಂಡನೆ ಶಿಕ್ಷೆ ರದ್ದಿಗೆ ಬಹುತೇಕ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿವೆಯೆಂದು ರಾಜ್ಯಸಭೆಗೆ ಇಂದು ತಿಳಿಸಲಾಯಿತು.