ವಿಧಾನಸಭೆಯಿಂದ ಮೇಲ್ಮನೆಗೆ ಕಾಂಗ್ರೆಸ್ಸಿನ ಎಲ್ಲ 6 ಸ್ಪರ್ಧಿಗಳ ಆಯ್ಕೆ
ಬೆಂಗಳೂರು, ಜೂನ್ 22– ಇಂದು ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎಲ್ಲ ಆರು ಸ್ಪರ್ಧಿಗಳು ಹಾಗೂ ಒಬ್ಬ ಸಂಸ್ಥಾ ಕಾಂಗ್ರೆಸ್ ಅಭ್ಯರ್ಥಿ ಮೊದಲನೇ ಸುತ್ತಿನಲ್ಲಿ ಚುನಾಯಿತರಾದರು.
ಎಂ.ಪಿ.ಸಿ.ಸಿ ವ್ಯವಸ್ಥಾಪಕ ಕಾರ್ಯದರ್ಶಿ ಎಂ.ವಿ. ವೆಂಕಟಪ್ಪ ಅವರು ಅತ್ಯಂತ ಹೆಚ್ಚು ಮತಗಳಿಸಿ ಪುನರಾಯ್ಕೆಯಾಗಿದ್ದಾರೆ.
ಆಯ್ಕೆ ಆದ ಅಭ್ಯರ್ಥಿಗಳು: ಎಸ್.ಎಂ. ಕೃಷ್ಣ (31), ಎಚ್.ಟಿ. ರೆಡ್ಡಿ (29), ಇಸ್ಲಾಯಿಲ್ ತಾಬಿಷ್ (28), ಎಂ.ಸಿ. ಪರುಮಾಳ್ (27), ಕೆ. ರಂಗಪ್ಪ (28), ಸಂಸ್ಥಾ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ಹೆಗ್ಗಡೆ (27)
ಕಂದಾಯ ವಸೂಲಿ: ಬಡ ರೈತರಿಗೆ ಅಧಿಕಾರಿಗಳಿಂದ ಕಿರುಕುಳ– ಆರೋಪ ನಿರಾಕರಣೆ
ಬೆಂಗಳೂರು, ಜೂನ್ 22– ‘ಕೊಡಲು ಶಕ್ತಿಯಿರುವವರಿಂದ ಸಂಪೂರ್ಣ ಭೂ ಕಂದಾಯ ವಸೂಲಿ, ಬಡ ರೈತರಿಂದ ಒಂದು ವರ್ಷದ ಬಾಕಿಗೆ ಮಾತ್ರ ಒತ್ತಾಯ’– ಸರ್ಕಾರದ ಈ ನೀತಿಯಲ್ಲಿ ಬದಲಾವಣೆಯೇನೂ ಆಗಿಲ್ಲ ಎಂದು ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.
ಬಡವರಿಂದಲೂ ಸಂಪೂರ್ಣ ಭೂ ಕಂದಾಯ ವಸೂಲಿಗೆ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ ಎಂಬ ವಿರೋಧ ಪಕ್ಷ ನಾಯಕ ಶ್ರೀ ಎಚ್.ಡಿ. ದೇವೇಗೌಡ ಅವರ ದೂರನ್ನು ನಿರಾಕರಿಸಿದ ಶ್ರೀ ಅರಸು ಅವರು, ‘ಸರ್ಕಾರದ ಆದೇಶದಲ್ಲಿ ಬದಲಾವಣೆಯೇನೂ ಆಗಿಲ್ಲ ಆದರೆ ಶ್ರೀಮಂತರಿಂದ ವಸೂಲಿ ಆಗುತ್ತಿರಬಹುದು’ ಎಂದರು.