ಎಸ್ಎಸ್ಎಲ್ಸಿ ರದ್ದು–ಸರಳ ಆಂತರಿಕ ಪರೀಕ್ಷೆ ವ್ಯವಸ್ಥೆಗೆ ಸಲಹೆ
ಬೆಂಗಳೂರು, ಮೇ 18– ಈಗಿನ ಎಸ್ಎಸ್ಎಲ್ಸಿ ಪರೀಕ್ಷೆ ವ್ಯವಸ್ಥೆಯನ್ನು ಕಿತ್ತುಹಾಕಿ, ಆಯಾ ಶಾಲೆಗಳೇ ಸರಳ ಆಂತರಿಕ ಪರೀಕ್ಷೆಗಳನ್ನು ನಡೆಸುವ ಕ್ರಮ ಜಾರಿಗೆ ತರಬೇಕೆಂಬ ಕ್ರಾಂತಿಕಾರಿ ಸಲಹೆಯನ್ನು ಶಾಲಾ ವ್ಯವಸ್ಥೆ ಪುನರ್ರಚನೆ ವಿಶೇಷಾಧಿಕಾರಿ ಪ್ರೊ. ಎ.ಸಿ.ದೇವೇಗೌಡರು ಸರ್ಕಾರದ ಮುಂದೆ ಮಂಡಿಸಿದ್ದಾರೆ.
ಬೋಧನೆ, ಪರೀಕ್ಷೆ ಮತ್ತು ಉದ್ಯೋಗಗಳ ನಡುವಿನ ‘ಅಪವಿತ್ರ ಸಂಬಂಧ’ವನ್ನು ಮುರಿಯಲು ಸಹಾಯಕವಾಗುವ ಈ ಸಲಹೆಯ ಪ್ರಕಾರ, ಕೆಲಸ ದೊರೆಯಲು ಬರೇ ಎಸ್ಎಸ್ಎಲ್ಸಿ ಸರ್ಟಿಫಿಕೇಟು ಅಥವಾ ಪದವಿ ಸರ್ಟಿಫಿಕೇಟುಗಳು ಮುಖ್ಯ ಆಧಾರವಾಗಿರಬೇಕಾಗಿಲ್ಲ.
ಕೆಲಸ ಸಿಗಲು ಅರ್ಹತೆಯು ಎಸ್ಎಸ್ಎಲ್ಸಿಯಲ್ಲಿ ತೇರ್ಗಡೆಯಾಗಿರುವ ಬದಲು, ಒಬ್ಬ ವ್ಯಕ್ತಿ ಯಾವ ಇಲಾಖೆ ಸೇರಬಯಸುತ್ತಾನೋ ಆ ಇಲಾಖೆಯ ಅವಶ್ಯಕತೆಗಳಿಗೆ ಅನುಗುಣವಾದಂತೆ, ಇಲಾಖಾ ಪರೀಕ್ಷೆಗೆ ಒಳಪಡುತ್ತಾನೆ. ಇಲ್ಲಿ ಅರ್ಹತೆಗೆ ಪ್ರಾಮುಖ್ಯ; ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳಿಗಲ್ಲ.
ಅಭ್ಯರ್ಥಿಯು ಶಾಲೆ, ಕಾಲೇಜುಗಳಿಗೆ ಹೋಗಿದ್ದಾನೆ ಎಂಬುದನ್ನು ತೋರಿಸಲು ಶಾಲೆ, ಕಾಲೇಜುಗಳು ತಮ್ಮದೇ ಆದ ಸರಳ ಪರೀಕ್ಷೆಗಳನ್ನು ನಡೆಸಿ, ಅಭ್ಯರ್ಥಿ ಇಷ್ಟರವರೆಗೆ ಕಲಿತಿದ್ದಾನೆ ಎಂದು ಸರ್ಟಿಫಿಕೇಟುಗಳನ್ನು ಕೊಡಬಹುದು.