ಬೆಂಗಳೂರು, ಜ. 27– ರಾಜ್ಯದಲ್ಲಿ ಗ್ರಾಮಾಂತರ ಪ್ರದೇಶದ ನಿರುದ್ಯೋಗಿ ಜನರಿಗೆ ಉದ್ಯೋಗ ದೊರಕಿಸಲು ರಾಜ್ಯ ಸರ್ಕಾರ ಕೈಗೊಳ್ಳಲಿರುವ ‘ಭೂಮಿಸೇನೆ’ ಯೋಜನೆ ಕಾರ್ಯಗತ ಮಾಡಲು ಮಂಡಳಿಯೊಂದನ್ನು ರಚಿಸಲಾಗುವುದು.
ನಿರುದ್ಯೋಗಿಗಳಾಗಿದ್ದು ಕೆಲಸ ಮಾಡಲೊಪ್ಪುವವರಿಗೆ ಉದ್ಯೋಗ ಒದಗಿಸಲು ‘ಭೂಮಿಸೇನೆ’ ಯೋಜನೆ ನಿರ್ಮಿಸುವ ತತ್ವಕ್ಕೆ ಮಂತ್ರಿಮಂಡಲ ಇಂದು ಒಪ್ಪಿಗೆ ನೀಡಿತು.
ನಿವೃತ್ತ ಸೇನಾಧಿಕಾರಿಯೊಬ್ಬರ ಅಧ್ಯಕ್ಷತೆಯಲ್ಲಿ ಮಂಡಳಿಯೊಂದನ್ನು ರಚಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ಮಂಡಳಿಯ ಸದಸ್ಯರಾಗಿರುವರು.
ಹತ್ತು ಎಕರೆವರೆಗೆ ಖುಷ್ಕಿ ಭೂಮಿ ಮೇಲಿನ ಕಂದಾಯ ರದ್ದು
ಬೆಂಗಳೂರು, ಜ. 27– ಹತ್ತು ಎಕರೆ ಅಥವಾ ಅದಕ್ಕಿಂತ ಕಡಿಮೆ ವಿಸ್ತೀರ್ಣದ ಖುಷ್ಕಿ ಜಮೀನಿಗೆ, ಎರಡು ಎಕರೆವರೆಗೆ ತರಿ ಜಮೀನಿಗೆ ಮತ್ತು ಒಂದು ಎಕರೆ ಬಾಗಾಯತು ಜಮೀನಿಗೆ ಭೂಕಂದಾಯ ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮಂತ್ರಿಮಂಡಲ ಇಂದು ಕೈಗೊಂಡ ನಿರ್ಧಾರವನ್ನು ವರದಿಗಾರರಿಗೆ ತಿಳಿಸಿದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು, ಇದು ‘ಕಂದಾಯ ವರ್ಷ’ ಆರಂಭದ ದಿನವಾದ 1971ನೇ ಜುಲೈ 1ರಿಂದ ಜಾರಿಗೆ ಬರುವುದೆಂದು ತಿಳಿಸಿದರು.