ನವದೆಹಲಿ, ಜ. 28– ಐದುನೂರ ಇಪ್ಪತ್ತು ಲೋಕಸಭೆ ಸ್ಥಾನಗಳ ಪೈಕಿ ನಾಲ್ಕು ನೂರ ಐವತ್ತು ಸ್ಥಾನಗಳ ವಿತರಣೆ ಬಗ್ಗೆ ಸಂಸ್ಥಾ ಕಾಂಗ್ರೆಸ್, ಜನಸಂಘ, ಎಸ್ಸೆಸ್ಪಿ ಮತ್ತು ಸ್ವತಂತ್ರ ಪಕ್ಷಗಳನ್ನೊಳಗೊಂಡ ಮೈತ್ರಿಕೂಟ ಒಪ್ಪಂದಕ್ಕೆ ಬಂದಿದೆ.
ಇಂದು ಇಲ್ಲಿನ ಪ್ರೆಸ್ಕ್ಲಬ್ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದ ಜನಸಂಘದ ಅಧ್ಯಕ್ಷ ಎ.ಬಿ.ವಾಜಪೇಯಿ ಅವರು, ತಮ್ಮ ಪಕ್ಷ 150 ಸ್ಥಾನಗಳಿಗೆ ಸ್ಪರ್ಧಿಸುವುದೆಂದರು.
‘ಚುನಾವಣೆಗೆ ಹಣ ಸಂಗ್ರಹಿಸಲು ಅಧಿಕಾರಿಗಳ ದುರುಪಯೋಗ’
ಬೆಂಗಳೂರು, ಜ. 28– ವಿರೋಧ ಪಕ್ಷದ ನಾಯಕ ಶ್ರೀ ಎಚ್.ಸಿದ್ಧವೀರಪ್ಪ ಅವರು ಇಂದು ರಾಜ್ಯಪಾಲರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಚುನಾವಣೆಗೆ ಹಣ ಸಂಗ್ರಹಿಸಲು ‘ಅಧಿಕಾರಿಗಳ ದುರುಪಯೋಗ’ ಹಾಗೂ ‘ನಿಷ್ಪಕ್ಷಪಾತ ಚುನಾವಣೆ ನಡೆಯುವ ಬಗ್ಗೆ ಇರುವ ಸಂದೇಹ’ಗಳನ್ನು ಅವರ ಗಮನಕ್ಕೆ ತಂದರು.