ತಿರುವನಂತಪುರ, ಡಿ. 30– ಅಣುಶಕ್ತಿ ಆಯೋಗ ಮತ್ತು ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ವಿಕ್ರಂ ಸಾರಾಭಾಯಿ (52) ಅವರು ಇಲ್ಲಿಗೆ 12 ಕಿಲೋಮೀಟರ್ ದೂರದಲ್ಲಿರುವ ಸರ್ಕಾರಿ ಪ್ರವಾಸಿ ಹೋಟೆಲಾದ ಕೋವಲಂ ಅರಮನೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು.
ಭಾರತದಲ್ಲಿ ಅಂತರಿಕ್ಷ ಯುಗ ಪ್ರವರ್ತಕ
ಮುಂಬಯಿ, ಡಿ. 30– ಇಂದು ಮುಂಜಾನೆ ತಿರುವನಂತಪುರದಲ್ಲಿ ನಿಧನರಾದ ಅಣುಶಕ್ತಿ ಆಯೋಗ ಮತ್ತು ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ವಿಕ್ರಂ ಸಾರಾಭಾಯಿ ಅವರು ವಿಜ್ಞಾನ ಜಗತ್ತಿನಲ್ಲಿ ಅತ್ಯಂತ ಗೌರವಾನ್ವಿತ ನಾಯಕರಲ್ಲೊಬ್ಬರು.
ಡಾ. ಹೋಮಿ ಭಾಭಾ ಅವರ ಆಕಸ್ಮಿಕ ಮರಣದ ನಂತರ ಅಣುಶಕ್ತಿ ಆಯೋಗದ ಅಧ್ಯಕ್ಷತೆ ವಹಿಸಿಕೊಂಡ ಡಾ. ಸಾರಾಭಾಯಿ ಅವರು ಶಾಂತಿಯುತ ಉದ್ದೇಶಗಳಿಗಾಗಿ ಅಣುಶಕ್ತಿ ಬಳಸುವ ಭಾರತದ ಯೋಜನೆಗಳನ್ನು ಅಸಾಧಾರಣ ಹುಮ್ಮಸ್ಸಿನಿಂದ ಪ್ರಗತಿಪಥದಲ್ಲಿ ಒಯ್ದು ರಾಷ್ಟ್ರದ ಅಣು ನೀತಿ ರೂಪಿಸಲು ಸಹಾಯ ಮಾಡಿದರು.