ಪುತ್ತೂರಿನಲ್ಲಿ ಗಾಳಿಯಲ್ಲಿ ಗುಂಡು, ಕರ್ಫ್ಯೂ; ಸುಳ್ಯದಲ್ಲಿ ನಿಷೇಧಾಜ್ಞೆ
ಮಂಗಳೂರು, ಆಗಸ್ಟ್ 11– ಪುತ್ತೂರಿನ ವಿದ್ಯಾರ್ಥಿನಿಯ ಕೊಲೆ ಪ್ರಕರಣವು ಸುಳ್ಯ ಹಾಗೂ ಜಾಲಸೂರಿನಲ್ಲಿ ಪ್ರತಿಧ್ವನಿಸಿ ಹಿಂಸಾಚಾರ ಘಟನೆಗಳು ನಡೆದಿವೆ. ಪುತ್ತೂರಿನಲ್ಲೂ ಉದ್ರಿಕ್ತ ಜನರನ್ನು ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಪರಿಸ್ಥಿತಿ ಉದ್ವಿಗ್ನವಾಗಿದ್ದು ಇಂದು ಸಂಜೆ 6 ಗಂಟೆಯಿಂದ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದೆ.
ಆರು ಮಂದಿ ಪೊಲೀಸರು, ಇಬ್ಬರು ನಾಗರಿಕರೂ ಸೇರಿದಂತೆ ಒಟ್ಟು ಎಂಟು ಮಂದಿಗೆ ಕಲ್ಲು ತೂರಾಟದಲ್ಲಿ ಗಾಯಗಳಾಗಿವೆ. ಪೊಲೀಸ್ ಜೀಪ್ವೊಂದು ಜಖಂ ಆಗಿದೆ. ಸ್ಥಳೀಯ ಹೋಟೆಲೊಂದು ಪ್ರತಿಭಟನಕಾರರ ಕೋಪಕ್ಕೆ ಗುರಿಯಾಗಿದೆ.
ರಾಜ್ಯದಲ್ಲಿ ಹೆಲ್ಮೆಟ್ ಕಡ್ಡಾಯ
ಬೆಂಗಳೂರು, ಆಗಸ್ಟ್ 11– ದ್ವಿಚಕ್ರ ವಾಹನಗಳ ಚಾಲಕ ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಗೊಳಿಸಿದ ಹೈಕೋರ್ಟ್, ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2ರಿಂದ ಈ ನಿಯಮ ಕಟ್ಟುನಿಟ್ಟಾಗಿ ಪಾಲನೆ ಯಾಗುವಂತೆ ನೋಡಿಕೊಳ್ಳಬೇಕೆಂದು ಆದೇಶಿಸಿತು.
ಹೆಲ್ಮೆಟ್ ಧರಿಸುವುದನ್ನು ಸಡಿಲಗೊಳಿಸಿದ ಮೇಲೆ ಸಂಭವಿಸಿದ ಅಪಘಾತಗಳಲ್ಲಿ ಶೇ 90ರಷ್ಟು ತಲೆಗೆ ಏಟು ಬೀಳುತ್ತಿದ್ದು, ಅವರಲ್ಲಿ ಸಾಯುವವರ ಸಂಖ್ಯೆ ಅಷ್ಟೇ ಹೆಚ್ಚಿದೆ. ಹೀಗೆ ಸಾಯುವವರಲ್ಲಿ ಯುವಜನರೇ ಹೆಚ್ಚಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿತು.