25 ವರ್ಷಗಳ ಹಿಂದೆ: ಭಾನುವಾರ ನವೆಂಬರ್ 10, 1996

ರೈತರು ಬೆಳೆ ನೀತಿ ಪಾಲಿಸಿದಲ್ಲಿ ಉತ್ಪನ್ನಗಳ ಬೆಲೆ ಕುಸಿತ ತಡೆ ಸಾಧ್ಯ: ಪಟೇಲ್
ಬೆಂಗಳೂರು, ನ. 9 – ರೈತರು ಬೆಳೆ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಈಗ ಅನುಭವಿಸುತ್ತಿರುವ ಬೆಲೆಯಲ್ಲಿನ ಏರುಪೇರೂ ಇರುವುದಿಲ್ಲ; ಸಂಕಷ್ಟದಲ್ಲಿ ಬೀಳುವ ಪಡಿಪಾಟಲೂ ಇರುವುದಿಲ್ಲ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ರಾಜ್ಯದ ರೈತರಿಗೆ ಕಿವಿಮಾತು ಹೇಳಿದರು.
ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ವಿವಿಧ ಬೆಳೆಗಳಲ್ಲಿ ಅತ್ಯಧಿಕ ಇಳುವರಿ ಪಡೆದವರಿಗೆ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿದ ಅವರು ‘ಯಾವುದಾದರೊಂದು ಬೆಳೆಗೆ ಒಳ್ಳೆ ಬೆಲೆ ಬಂತೆಂದರೆ ಅಷ್ಟೇ ಸಾಕು ಎಲ್ಲಾ ರೈತರೂ ಅದನ್ನೇ ಬೆಳೆಯುತ್ತಾರೆ. ಬೆಲೆ ಕುಸಿತಕ್ಕೆ ಬಲಿಯಾಗುತ್ತಾರೆ. ಬೆಳೆ ನೀತಿ ಪಾಲಿಸುವುದರಿಂದ ಇಂಥ ಅನಾಹುತದಿಂದ ಪಾರಾಗಲು ಸಾಧ್ಯ’ ಎಂದರು.
ಸೌಂದರ್ಯ ಸ್ಪರ್ಧೆಗೆ ಸರ್ಕಾರಿ ವೆಚ್ಚ ಇಲ್ಲ: ನಾಣಯ್ಯ ಸ್ಪಷ್ಟನೆ
ಬೆಂಗಳೂರು, ನ. 9– ವಿಶ್ವಸುಂದರಿ ಸ್ಪರ್ಧೆ ನಗರದಲ್ಲಿ ನಡೆಯುವುದರಿಂದ ರಾಜ್ಯ ಸರ್ಕಾರ ಆ ಕಾರ್ಯಕ್ರಮಕ್ಕಾಗಿ ಹಣ ಖರ್ಚು ಮಾಡುವ ಪ್ರಶ್ನೆಯೇ ಇಲ್ಲ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಎಂ.ಸಿ. ನಾಣಯ್ಯ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಸಭೆಯನ್ನು ಮುಗಿಸಿ ಬಂದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಾನೂನು ಮತ್ತು ಸುವ್ಯವಸ್ಥೆಗೆ ಭದ್ರತಾ ವ್ಯವಸ್ಥೆ ಬಿಟ್ಟರೆ ಸರ್ಕಾರದ ಪಾತ್ರ ಏನಿಲ್ಲ. ಇದು ಸಂಪೂರ್ಣ ಖಾಸಗೀ ಹಾಗೂ ವಾಣಿಜ್ಯ ವ್ಯಾಪ್ತಿಗೆ ಬರುವ ಕಾರ್ಯಕ್ರಮ. ವಿದೇಶಗಳಿಂದ ಜನ ಬರುವಾಗ ಅವರಿಗೆ ಭದ್ರತೆ ನೀಡುವುದು ಸರ್ಕಾರದ ಕರ್ತವ್ಯ. ಈ ಸಂದರ್ಭದಲ್ಲಿ ಕೆಲವು ದೇಶಗಳ ಪ್ರಮುಖರು ಭಾಗವಹಿಸುವ ಸಂಭವವಿದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.