ಎಪಿಎಂಸಿಗಳಿಗೆ ಮೂವರು ಸದಸ್ಯರ ನಾಮಕರಣ: ಸುಗ್ರೀವಾಜ್ಞೆ ಜಾರಿ ಬೆಂಗಳೂರು, ಮೇ 23– ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಮೂವರು ಸದಸ್ಯರನ್ನು ನಾಮಕರಣ ಮಾಡಲು ಸರ್ಕಾರ ಗುರುವಾರ ಸುಗ್ರೀವಾಜ್ಞೆ ಹೊರಡಿಸಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಮೂವರು ಸದಸ್ಯರ ನಾಮಕರಣ ಮಾಡುವುದಕ್ಕೆ ಸರ್ಕಾರದ ನಿರ್ಧಾರ ಸಾಕಷ್ಟು ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಈ ಸುಗ್ರೀವಾಜ್ಞೆಗೆ ವಿಶೇಷ ಮಹತ್ವ ಬಂದಿತ್ತು.
ಈ ವಿಚಾರದಲ್ಲಿ ರಾಜ್ಯ ಸಚಿವ ಸಂಪುಟ ನಿರ್ಧಾರ ತೆಳೆದು ಕರಡನ್ನು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಿದ ಕೂಡಲೇ ಕಾಂಗ್ರೆಸ್ ಪಕ್ಷದವರು ನಿಯೋಗದಲ್ಲಿ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರನ್ನು ಭೇಟಿ ಮಾಡಿ ಸುಗ್ರೀವಾಜ್ಞೆ ತರುವುದಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಪೂರ್ವಕ ಮನವಿ ಮಾಡಿಕೊಂಡಿದ್ದರು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯಪಾಲರು ಸುಗ್ರೀವಾಜ್ಞೆ ಸಂಬಂಧದಲ್ಲಿಕೆಲವೊಂದು ಸ್ಪಷ್ಟನೆಗಳನ್ನು ಸರ್ಕಾರದಿಂದ ಕೇಳಿದ್ದರು.
ನಂತರ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಮತ್ತು ಕಾನೂನು ಸಚಿವ ಎಂ.ಸಿ.ನಾಣಯ್ಯ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಬಂದಿದ್ದರು. ಇದಾದ ನಂತರ ರಾಜ್ಯಪಾಲರು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಿತ– ತಿದ್ದುಪಡಿ) ಸುಗ್ರೀವಾಜ್ಞೆ 1997 ಅನ್ನು ಹೊರಡಿಸಿ ಒಮ್ಮೆಗೆ ಇದನ್ನುಜಾರಿಗೊಳಿಸಿದ್ದಾರೆ.