ಅಕ್ರಮವಾಗಿ ಧಾನ್ಯ ಬಚ್ಚಿಟ್ಟಿರುವ ಜಮೀನ್ದಾರರು, ವರ್ತಕರ ಬಗ್ಗೆ ಕ್ರಮ
ಕಲ್ಬುರ್ಗಿ, ಆಗಸ್ಟ್ 11– ರಾಜ್ಯದ ಅಭಾವಪೀಡಿತ ಪ್ರದೇಶಗಳಲ್ಲಿ ಅಕ್ರಮವಾಗಿ ನೂರಾರು ಕ್ವಿಂಟಲ್ ಗಳಷ್ಟು ಧಾನ್ಯವನ್ನು ಸಂಗ್ರಹಿಸಿಟ್ಟಿರುವ ಜಮೀನ್ದಾರರು ಹಾಗೂ ವರ್ತಕರ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳು ರಹಸ್ಯವಾಗಿ ಸಿದ್ಧ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.
ಅಭಾವಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಲ್ಲಿ, ಆ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ರೂಪಿಸುತ್ತಿರುವ ಸಮಗ್ರ ಕಾರ್ಯಕ್ರಮದ ಅಂಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಪ್ರಧಾನಿ ಜತೆ ಅರಸು ಚರ್ಚೆ
ನವದೆಹಲಿ, ಆಗಸ್ಟ್ 11– ಮೈಸೂರು ಮುಖ್ಯಮಂತ್ರಿ ದೇವರಾಜ ಅರಸು ಅವರು ಇಂದು ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡಿ, ರಾಜ್ಯದ ವಿವಿಧ ಸಮಸ್ಯೆಗ ಕುರಿತು ವಿಚಾರ ವಿನಿಮಯ ನಡೆಸಿದರು.
ಕೈಗಾರಿಕಾಭಿವೃದ್ಧಿ ಸಚಿವ ಸುಬ್ರಹ್ಮಣ್ಯಂ, ಸಚಿವ ಟಿ.ಎ. ಪೈ ಮತ್ತು ಸಚಿವ ಕೆ.ಸಿ. ಪಂತ್ ಅವರುಗಳನ್ನು ಅರಸು ಭೇಟಿ ಮಾಡಿದರು.
ಪ್ರಧಾನಿ ಜತೆ ಚರ್ಚಿಸಲಾದ ಇನ್ನೊಂದು ಅಂಶವೆಂದರೆ, ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರಿಡಬೇಕೆಂಬ ರಾಜ್ಯ ಸರ್ಕಾರದ ನಿರ್ಧಾರ. ಈ ಬಗೆಗೆ, ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕೃತವಾಗಿದ್ದು, ಅದಕ್ಕೆ ಸಂಸತ್ತಿನ ಮುದ್ರೆ ಬೀಳಬೇಕಾಗಿದೆ.