ಭ್ರಷ್ಟಾಚಾರ ದೂರುಗಳ ವಿಚಾರಣೆಗೆ ಪ್ರಧಾನಿ ಕಚೇರಿಯಲ್ಲಿ ಪ್ರತ್ಯೇಕ ಘಟಕ ನವದೆಹಲಿ, ಆ.16 (ಪಿಟಿಐ, ಯುಎನ್ಐ)– ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳ ವಿಚಾರಣೆಗೆ ತಮ್ಮ ಕಚೇರಿಯಲ್ಲಿ ವಿಶೇಷ ವಿಭಾಗವನ್ನು ಆರಂಭಿಸಲಾಗುವುದು ಎಂದು ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಇಂದು ಇಲ್ಲಿ ಪ್ರಕಟಿಸಿದರು.
ಭಾರತದ ಕೈಗಾರಿಕಾ ಕ್ಷೇತ್ರ ಐವತ್ತು ವರ್ಷಕ್ಕೆ ಕಾಲಿಟ್ಟ ಸಂದರ್ಭಕ್ಕೆ ಭಾರತ ಕೈಗಾರಿಕಾ ಒಕ್ಕೂಟ ಸಂಘಟಿಸಿದ್ದ ಕೈಗಾರಿಕೋದ್ಯಮಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಗುಜ್ರಾಲ್ ಅವರು ‘ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲ ದೂರುಗಳ ಬಗ್ಗೆ ನೇರವಾಗಿ ಕ್ರಮ ತೆಗೆದುಕೊಳ್ಳುವ ಉದ್ದೇಶದಿಂದ ಈ ವಿಭಾಗ ತೆರೆಯಲಾಗುತ್ತಿದೆ. ದಯವಿಟ್ಟು ಈ ವಿಷಯದಲ್ಲಿ ನನಗೆ ನೆರವಾಗಿ’ ಎಂದು ಮನವಿ ಮಾಡಿದರು.
‘ಯಾರು ಲಂಚ ಪಡೆಯುತ್ತಾರೆ ಎಂಬುದು ನಿಮಗೆ ತಿಳಿದಿದೆ, ಅವರು ಯಾರು ಎಂಬುದನ್ನು ನನಗೆ ತಿಳಿಸಿ. ನಿಮಗೆ ಬೆಂಬಲ ಹಾಗೂ ರಕ್ಷಣೆ ನೀಡುವ ಆಶ್ವಾಸನೆಯನ್ನುನಾನು ನೀಡುತ್ತೇನೆ. ಕಿರುಕುಳಕ್ಕೆ ಒಳಗಾದವರು ಲಂಚ ತೆಗೆದುಕೊಳ್ಳುವವರ ಬಗ್ಗೆ ಯಾವುದೇ ಹೆದರಿಕೆ ಇಲ್ಲದೆ ಮಾಹಿತಿ ನೀಡಬೇಕು. ವೈಯಕ್ತಿಕವಾಗಿ ಹಾಗೆ ಮಾಡಲು ಸಾಧ್ಯವಾಗದಿದ್ದರೆ ಸಾಮೂಹಿಕವಾಗಿಯಾದರೂ ಮಾಹಿತಿ ಒದಗಿಸಿ’ ಎಂದು ಅವರು ಹೇಳಿದರು.
ಕೃಷ್ಣಕಾಂತ್ ನೂತನ ಉಪರಾಷ್ಟ್ರಪತಿ ನವದೆಹಲಿ, ಆ.16 (ಯುಎನ್ಐ)– ದೇಶದ ಹನ್ನೊಂದನೇ ಉಪರಾಷ್ಟ್ರಪತಿಯಾಗಿ ಹಿರಿಯ ಗಾಂಧಿವಾದಿ ಹಾಗೂ ಆಂಧ್ರದ ರಾಜ್ಯಪಾಲ ಕೃಷ್ಣಕಾಂತ್ ಆಯ್ಕೆ ಆಗಿದ್ದಾರೆ.