ಲಖನೌ, ಅ. 19 (ಪಿಟಿಐ, ಯುಎನ್ಐ)– ಬಹುಜನ ಸಮಾಜ ಪಕ್ಷವು 29 ದಿನಗಳ ಕಲ್ಯಾಣ್ ಸಿಂಗ್ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರಕ್ಕೆ ಇಂದು ಬೆಂಬಲ ವಾಪಸ್ ಪಡೆಯುವ ಮೂಲಕ ಉತ್ತರಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಮತ್ತೆ ತಲೆದೋರಿದೆ.
ಈ ಕ್ಷಿಪ್ರ ಬೆಳವಣಿಗೆ ಹಿನ್ನೆಲೆಯಲ್ಲಿ ಮಂಗಳವಾರವೇ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ರೊಮೇಶ್ ಭಂಡಾರಿ ಅವರು ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರಿಗೆ ಸೂಚಿಸಿದ್ದಾರೆ.
ಘರ್ಷಣೆ: 100 ತಮಿಳು ಉಗ್ರರ ಸಾವು
ಕೊಲಂಬೊ, ಅ. 19 (ಪಿಟಿಐ)– ಕಳೆದ ರಾತ್ರಿ ಮುಲ್ಲೈತೀವು ಕರಾವಳಿ ಸಮೀಪ ಐದು ಗಂಟೆಗಳ ಕಾಲ ನೌಕಾಪಡೆ ಮತ್ತು ಉಗ್ರರ ಮಧ್ಯೆ ನಡೆದ ಕಾಳಗದಲ್ಲಿ ಕನಿಷ್ಠ 100 ಎಲ್ಟಿಟಿಇ ಉಗ್ರರು ಮತ್ತು ಶ್ರೀಲಂಕಾ ನೌಕಾಪಡೆಯ ಇಬ್ಬರು ಸಿಬ್ಬಂದಿ ಸತ್ತಿದ್ದಾರೆ.
ಎಲ್ಟಿಟಿಇ ಉಗ್ರರನ್ನು ಒಳಗೊಂಡ 7 ದೋಣಿಗಳನ್ನು ನಾಶಪಡಿಸಲಾಯಿತು. ಎಲ್ಟಿಟಿಇ ಉಗ್ರರ ದಾಳಿಗೆ ತೀವ್ರ ಗಾಯಗೊಂಡ ಇಬ್ಬರು ಶ್ರೀಲಂಕಾ ನೌಕಾಪಡೆಯ ಸೈನಿಕರು ಆನಂತರ ಸತ್ತರು. ಕಾಣೆಯಾಗಿರುವ ಏಳು ಮಂದಿ ನೌಕಾಪಡೆಯ ಸಿಬ್ಬಂದಿ ಪತ್ತೆಗೆ ಭೂ ಹಾಗೂ ಜಲಮಾರ್ಗವಾಗಿ ಶೋಧ ಕಾರ್ಯ ನಡೆದಿದೆ. ಜಲಮಾರ್ಗವಾಗಿ ದಾಳಿ ನಡೆಸುವ ಎಲ್ಟಿಟಿಇ 35 ಉಗ್ರರು ಸೇರಿ ಒಟ್ಟು 100 ಉಗ್ರರು ಸತ್ತಿದ್ದಾರೆ.