ನಗರ ಕೊಳಚೆ ಪ್ರದೇಶ ನಿರ್ಮೂಲನ ಕಾರ್ಯಕ್ರಮಕ್ಕೆ ಹೆಚ್ಚುವರಿ ಧನಸಹಾಯ
ನವದೆಹಲಿ, ಅ. 19– ಯೋಜನಾ ಆಯೋಗದ ಹೆಚ್ಚುವರಿ ಧನಸಹಾಯದಿಂದ 1972–73ನೇ ಸಾಲಿನ ಒಂದು ಕೋಟಿ ಐವತ್ತು ಲಕ್ಷ ರೂಪಾಯಿ ವೆಚ್ಚದ ಬೆಂಗಳೂರು ನಗರ ಕೊಳಚೆ ಪ್ರದೇಶ ನಿರ್ಮೂಲನೆ ಕಾರ್ಯಕ್ರಮ ಜಾರಿಗೆ ಬರಲಿದೆ.
ಕನಿಷ್ಠಪಕ್ಷ ಪ್ರತೀ ರಾಜ್ಯದ ಒಂದು ಪ್ರಮುಖ ನಗರವನ್ನು ಕೊಳಚೆ ಪ್ರದೇಶ ಪರಿಸರ ಸುಧಾರಣೆ ಕಾರ್ಯಕ್ರಮದ ವ್ಯಾಪ್ತಿಗೊಳಪಡಿಸಲು ಯೋಜನಾ ಆಯೋಗ ಒಪ್ಪಿದ್ದು, ಇದಕ್ಕಾಗಿ ಪ್ರಸಕ್ತ ವರ್ಷದಲ್ಲಿ ಎರಡು ಕೋಟಿ ರೂಪಾಯಿ ಹೆಚ್ಚುವರಿ ಹಣ ಒದಗಿಸಲಾಗಿದೆ.
ಕೇಂದ್ರ ವಸತಿ ಮತ್ತು ಕಾಮಗಾರಿ ಶಾಖೆ ಸಚಿವ ಉಮಾಶಂಕರ ದೀಕ್ಷಿತ್ ಅವರು ಇಂದು ತಮ್ಮ ಶಾಖೆಯ ಸಮಾಲೋಚನಾ ಸಮಿತಿ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಬಾಂಗ್ಲಾ ದೇಶಕ್ಕೆ ಯುನೆಸ್ಕೊ ಸದಸ್ಯತ್ವ
ಪ್ಯಾರಿಸ್, ಅ. 19– ಬಾಂಗ್ಲಾದೇಶ ಇಂದು ಯುನೆಸ್ಕೊ ಸದಸ್ಯತ್ವ ಪಡೆಯಿತು. ಇಂದು ಇಲ್ಲಿ ಸಮಾವೇಶಗೊಂಡಿದ್ದ ಯುನೆಸ್ಕೊ ಜನರಲ್ ಅಸೆಂಬ್ಲಿ ಹದಿನೇಳನೇ ಅಧಿವೇಶನ 84–22 ಮತಗಳಿಂದ ಬಾಂಗ್ಲಾದೇಶವನ್ನು ಸೇರಿಸಿಕೊಳ್ಳುವ ನಿರ್ಣಯವನ್ನು ಅಂಗೀಕರಿಸಿತು. ಆರು ರಾಷ್ಟ್ರಗಳು ನಿರ್ಣಯದ ವಿರುದ್ಧ ಮತ ನೀಡಿದವು.