ಬೆಂಗಳೂರು, ಮಾ. 5– ಭಾನುವಾರ ಮತದಾನ ಇರುವುದರಿಂದ ಶನಿವಾರ ಬೆಂಗಳೂರು ಪ್ರಚಾರದ ಬಿರುಸು, ಧ್ವನಿವರ್ಧಕಗಳ ಗದ್ದಲದಿಂದ ದೂರವಾಗಿತ್ತು ಆದರೆ ಮನೆಗಳಿಗೆ ಹೋಗಿ ಮತದಾರರನ್ನು ಭೇಟಿ ಮಾಡುವ ಅಭ್ಯರ್ಥಿಗಳ ಪರ ಪ್ರಚಾರಕರ ತಂಡದ ಚಟುವಟಿಕೆ ಅಲ್ಲಲ್ಲಿ ಕಂಡು ಬಂತು. ಅಭ್ಯರ್ಥಿಗಳ ಸಂಕೇತ, ವ್ಯಾನ್ಗಳ ಮೇಲೆ ಮೆರೆದಿದ್ದು ಪ್ರಚಾರದ ವೈಶಿಷ್ಟ್ಯ. ಆಳೆತ್ತರದ ಪ್ರಧಾನಿ ಗಾಂಧಿ ಅವರ ಪ್ರತಿಮೆ ಆಡಳಿತ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಮತದಾರರ ಮನ ಸೆಳೆಯಲು ಅನುಸರಿಸಿದ ತಂತ್ರ. ಅದೇ ರೀತಿ ಆನೆ, ದೀಪ, ರಾಟೆ ಮೊದಲಾದವೂ ವಾಹನಗಳ ಮೇಲೆ ಮೆರೆದವು.