ನವದೆಹಲಿ, ಫೆ. 27– ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಬಗೆಗೆ ಡಾ. ವೆಂಕಟಗಿರಿಗೌಡ ಅವರು ಬರೆದಿರುವ ಕೃತಿಯ ಪ್ರಸ್ತಾವ ಇಂದು ಮತ್ತೆ ಲೋಕಸಭೆಯಲ್ಲಿ ಪ್ರತಿಧ್ವನಿಸಿದ್ದರಿಂದ ಕರ್ನಾಟಕದ ಬಿಜೆಪಿ ಮತ್ತು ಜನತಾದಳದ ಸದಸ್ಯರ ನಡುವೆ ನಡೆದ ಮಾತಿನ ಚಕಮಕಿ ಸುಮಾರು ಇಪ್ಪತ್ತು ನಿಮಿಷ ಕಾಲ ಗದ್ದಲಕ್ಕೆ ಎಡೆಕೊಟ್ಟಿತು.
ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನೆ ಸೂಚಿಸುವ ನಿರ್ಣಯದ ಮೇಲೆ ಮಾತು ಆರಂಭಿಸಿದ ಬಿಜೆಪಿ ಸದಸ್ಯ ಅನಂತ ಕುಮಾರ್ ಅವರ ಪೂರ್ಣ ಭಾಷಣವೆಲ್ಲ ಪ್ರಧಾನಿ ಗೌಡರ ರಾಜಕೀಯ ಮತ್ತು ಜನತಾದಳವನ್ನು ಲೇವಡಿ ಮಾಡುವತ್ತ ತಿರುಗಿದ್ದರಿಂದ, ಅವರ ಭಾಷಣಕ್ಕೆ ಜನತಾದಳದ ಸದಸ್ಯರಿಂದ ಹೆಜ್ಜೆ ಹೆಜ್ಜೆಗೂ ಅಡಚಣೆ ಮತ್ತು ಕ್ರಿಯಾಲೋಪ ಪ್ರಸ್ತಾಪವಾಯಿತು.
ಎಲ್ಪಿಜಿ, ದೂರವಾಣಿ ಎಂಪಿ ಕೋಟಾ ರದ್ದು: ರಾಜ್ಯಸಭೆ ಆಕ್ಷೇಪ
ನವದೆಹಲಿ, ಫೆ. 27 (ಯುಎನ್ಐ, ಪಿಟಿಐ)– ಅಡುಗೆ ಅನಿಲ (ಎಲ್ಪಿಜಿ) ಹಾಗೂ ದೂರವಾಣಿ ಸಂಪರ್ಕ ನೀಡುವ ಸಂಸತ್ ಸದಸ್ಯರ ವಿವೇಚನಾ ಕೋಟಾವನ್ನು ರದ್ದು ಪಡಿಸುವ ಲೋಕಾಸಭೆಯ ಸ್ಪೀಕರ್ ಅವರ ‘ಏಕಪಕ್ಷೀಯ ನಿರ್ಧಾರ’ಕ್ಕೆ ರಾಜ್ಯಸಭೆಯಲ್ಲಿ ಇಂದು ತೀವ್ರ ಆಕ್ಷೇಪ ವ್ಯಕ್ತವಾಯಿತು.