ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಿಸಲು ರಾಜ್ಯದ ಸೂಚನೆಗೆ ಕೇಂದ್ರದ ನಿರಾಕರಣೆ
ನವದೆಹಲಿ, ಜ. 3– 1972–73ರ ಸಾಲಿಗೆ ಕಬ್ಬಿನ ಬೆಲೆಯನ್ನು ಟನ್ನಿಗೆ 85 ರೂ.ಗಳಂತೆ ಬೆಂಬಲ ಬೆಲೆ ನಿಗದಿ ಮಾಡಬೇಕೆಂಬ ಮೈಸೂರು ರಾಜ್ಯದ ಮನವಿಯನ್ನು ಕೇಂದ್ರ ಕೃಷಿ ಖಾತೆ ತಳ್ಳಿ ಹಾಕಿದೆ ಎಂದು ವರದಿಯಾಗಿದೆ.
ಕಬ್ಬಿನ ಬೆಳೆ ಅಭಿವೃದ್ಧಿ ಬಗ್ಗೆ ತಂತ್ರವನ್ನು ರೂಪಿಸಲು ರಾಜ್ಯದ ಅಧಿಕಾರಿಗಳು ಹಾಗೂ ಕೇಂದ್ರ ಸಚಿವ ಖಾತೆಯ ಅಧಿಕಾರಿಗಳ ನಡುವೆ ಇಂದು ನಡೆದ ಮಾತುಕತೆಗಳಲ್ಲಿ ಹೆಚ್ಚಿನ ಬೆಲೆ ನಿಗದಿ ಮಾಡಬೇಕೆಂಬ ರಾಜ್ಯದ ಸಲಹೆಯನ್ನು ಸಕ್ಕರೆ ಬೆಲೆ ಹೆಚ್ಚಬಹುದೆಂಬ ಭೀತಿಯಿಂದ ನಿರಾಕರಿಸಲಾಯಿತು.
‘ಭದ್ರಾವತಿ’ ಅಕ್ರಮ: ಕೇಂದ್ರ ಮಂಡಳಿ ತನಿಖೆ
ಬೆಂಗಳೂರು, ಜ. 3– ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ನಡೆದಿದೆಯೆನ್ನಲಾದ ಅಕ್ರಮ ವ್ಯವಹಾರಗಳಲ್ಲಿ 3 ಪ್ರಕರಣಗಳನ್ನು ಹೆಚ್ಚಿನ ತನಿಖೆಗಾಗಿ ಕೇಂದ್ರದ ತನಿಖೆ ಮಂಡಳಿಗೆ ವಹಿಸಲಾಗಿದೆ.
ಇಂದು ಈ ವಿಷಯವನ್ನು ವರದಿಗಾರರಿಗೆ ತಿಳಿಸಿದ ರಾಜ್ಯಪಾಲ ಶ್ರೀ ಧರ್ಮವೀರ ಅವರು, ‘ಮತ್ತೊಂದು ಪ್ರಕರಣವನ್ನು ನನಗೆ ವರದಿ ಮಾಡಲು ಕಾರ್ಖಾನೆಯ ಅಧ್ಯಕ್ಷರು ಪರಿಶೀಲಿಸುತ್ತಿದ್ದಾರೆ’ ಎಂದು ಹೇಳಿ ಉಳಿದ ಕೆಲವು ಆಡಳಿತಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸೂಕ್ತ ಆಜ್ಞೆಗಳನ್ನು ಮಾಡಲಾಗಿದೆ ಎಂದರು.