ಪುರಸಭೆಗಳಿಗೆ ವಾಹನ ತೆರಿಗೆ ಹಂಚಿಕೆ: ಅನ್ಯಾಯ ನಿವಾರಣೆಗೆ ನಿರ್ಧಾರ
ಬೆಂಗಳೂರು, ಏ. 5– ಕಳೆದ ಒಂದೆರಡು ದಶಕಗಳಿಂದ ರಾಜ್ಯದ ಬಹುತೇಕ ಪುರಸಭೆಗಳಿಂದ ನೂರಾರು ಮನವಿ, ಪ್ರಾರ್ಥನೆಗಳಿಗೆ ಕಾರಣವಾದ ‘ಮೋಟಾರು ವಾಹನ ತೆರಿಗೆಯ ಪಾಲು ಹಂಚಿಕೆಯಲ್ಲಿರುವ ಅನ್ಯಾಯವನ್ನು’ ಸರಿಪಡಿಸಲು ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ನಿರ್ಧರಿಸಿದ್ದಾರೆ.
‘ಬಹಳ ವರ್ಷದಿಂದ ಸರ್ಕಾರ ಈ ಸಮಸ್ಯೆಯನ್ನು ಎದುರಿಸಲಿಲ್ಲ, ಬಗೆಹರಿಸಲೂ ಇಲ್ಲ. ಈಗಲಾದರೂ, ಅದನ್ನು ಬಗೆಹರಿಸಿ, ಪುರಸಭೆಗಳಿಗೆ ಹೆಚ್ಚು ಆದಾಯ ದೊರಕಿಸುವುದು ಸೂಕ್ತ’ ಎಂದು ಮುಖ್ಯಮಂತ್ರಿಯವರು ಇಂದು ಸಂಜೆ ಲಾಲ್ಬಾಗ್ನಲ್ಲಿ ಬೆಂಗಳೂರು ನಗರಸಭೆ ಏರ್ಪಡಿಸಿದ ಪೌರ ಸನ್ಮಾನದಲ್ಲಿ ಮಾತನಾಡಿದಾಗ ತಿಳಿಸಿದರು.
ನಿರುದ್ಯೋಗ ನಿವಾರಣೆ: ವಾರ್ಷಿಕ ಯೋಜನೆ ಜಾರಿಗೆ ಸುಬ್ರಹ್ಮಣ್ಯಂ ಕರೆ
ನವದೆಹಲಿ, ಏ. 5– 1972–73ರಲ್ಲಿ ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ನೇರವಾಗಿ ಎದುರಿಸಿ ನಿವಾರಿಸಲು ವಾರ್ಷಿಕ ಯೋಜನೆಯಲ್ಲಿ ಸೂಚಿಸಿರುವ ವಿವಿಧ ಕಾರ್ಯಕ್ರಮಗಳನ್ನು, ತ್ವರಿತವಾಗಿ ಮತ್ತು ಪೂರ್ಣ ಮನಸ್ಸಿನಿಂದ ಅನುಷ್ಠಾನಕ್ಕೆ ತರುವುದು ಅತ್ಯಗತ್ಯ ಎಂದು ಯೋಜನಾ ಸಚಿವ ಶ್ರೀ ಸಿ.ಸುಬ್ರಹ್ಮಣ್ಯಂ ಇಂದು ಕರೆ ನೀಡಿದರು.
ನಾಲ್ಕನೇ ಪಂಚವಾರ್ಷಿಕ ಯೋಜನೆ ಬಗ್ಗೆ ಮಧ್ಯಂತರ ವಿಮರ್ಶೆ ಕುರಿತು ನಿರ್ಣಯವೊಂದನ್ನು ಲೋಕಸಭೆಯಲ್ಲಿ ಅವರು ಮಂಡಿಸಿದರು.